ಗಂಗಾವತಿ: 15 ವರ್ಷಗಳ ಹಿಂದೆ ಪತಿಯನ್ನು ಪತ್ನಿಯು ಇತರರ ಮೂಲಕ ಕೊಲೆ ಮಾಡಿಸಿ ಮುಚ್ಚಿ ಹಾಕಿದ್ದ ಪ್ರಕರಣವು ಬೆಳಕಿಗೆ ಬಂದಿದ್ದು, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಜನ ಆರೋಪಿಗಳನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು
ವಿರುಪಾಪೂರ ನಗರದ ಲಕ್ಷ್ಮಿ ಸಿಂಗ್ (ಪತ್ನಿ), ಅಮ್ಜದ್ಖಾನ್, ಅಬ್ದುಲ್ ಹಫೀಜ್, ಬಾಬಾ ಜಾಕೀರಬಾಷಾ ಹಾಗೂ ಈಳಿಗನೂರ ಗ್ರಾಮದ ಶಿವನಗೌಡ ಬಂಧಿತ ಆರೋಪಿಗಳು
2005ರ ಆಗಸ್ಟ್ನಲ್ಲಿ ಶಂಕರಸಿಂಗ್ ಅವರನ್ನು ಪತ್ನಿ ಲಕ್ಷ್ಮೀಸಿಂಗ್ ಸೇರಿದಂತೆ ಮೂರು ಜನ ಆರೋಪಿಗಳು ಗಂಗಾವತಿಯ ಜಯನಗರದಲ್ಲಿ ಕೊಲೆ ಮಾಡಿ, ಮನೆಯ ಪಕ್ಕದಲ್ಲಿರುವ ಖಾಲಿ ನಿವೇಶನದಲ್ಲಿ ಮೃತದೇಹವನ್ನು ಮುಚ್ಚಿ ಹಾಕಿದ್ದರು.
2015 ರಲ್ಲಿ ಆ ಖಾಲಿ ನಿವೇಶನವನ್ನು ಈಳಿಗನೂರ ಗ್ರಾಮದ ಶಿವನಗೌಡ ಎನ್ನುವವರು ಖರೀದಿ ಮಾಡಿ ಮನೆಯನ್ನು ಕಟ್ಟಿಸುತ್ತಿರುವ ವೇಳೆಯಲ್ಲಿ ಶವದ ಮೂಳೆಗಳು ಪತ್ತೆಯಾಗಿವೆ. ಮೂಳೆಗಳು ಸೇರಿದಂತೆ ಬಟ್ಟೆ ಹಾಗೂ ದೇಹದಲ್ಲಿ ಮೇಲಿದ್ದ ಇತರ ವಸ್ತುಗಳಿಂದ ಮಕ್ಕಳು ಗುರುತಿಸಿದ್ದಾರೆ. ಆದರೆ ಅವರಿಗೆ ಕೊಲೆ ಬೆದರಿಕೆಯನ್ನು ಹಾಕಿ, ಶವದ ಮೂಳೆಗಳನ್ನು ಸುಟ್ಟು ಹಾಕಿ ಸಾಕ್ಷಿ ನಾಶ ಮಾಡಲಾಗಿತ್ತು. ಕೊಲೆಯಾಗಿರುವ ವ್ಯಕ್ತಿಯ ಪುತ್ರಿ ವಿದ್ಯಾಸಿಂಗ್ ಅವರು ನಗರಠಾಣೆಗೆ ದೂರು ನೀಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 4 ಜನ ಆರೋಪಿಗಳನ್ನು ಹಾಗೂ ಶವದ ಮೂಳೆಗಳನ್ನು ಸುಟ್ಟು ಸಾಕ್ಷಿ ನಾಶ ಪಡಿಸಿದ್ದ ಶಿವನಗೌಡ ಅವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.