ಚಡಚಣ: ‘ಸಾಮೂಹಿಕ ವಿವಾಹದಿಂದ ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ಜೊತೆಗೆ ಸಮಾಜದಲ್ಲಿ ಸಮಾನತೆ ಮೂಡಿಸಬಹುದು’ ಎಂದು ಶ್ರೀಶೈಲ ಪೀಠದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಹೇಳಿದರು.
ಸಮೀಪದ ಜೇವೂರ ಗ್ರಾಮದಲ್ಲಿ ಮಂಗಳವಾರ ಹಠಯೋಗಿ ರೇವಣಿಸಿದ್ದೇಶ್ವರ ಸ್ವಾಮೀಜಿ 32ನೇ ಪುಣ್ಯಾರಾಧನೆ ನಿಮಿತ್ತ ಆಯೋಜಿಸಿದ್ದ ಉಚಿತ ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
‘ರಾಜಕೀಯದಲ್ಲಿ ಧರ್ಮ ಇರಬೇಕು. ವಿನಾ ಧರ್ಮದಲ್ಲಿ ರಾಜಕೀಯ ಮಾಡುವುದು ಸಲ್ಲದು. ಲಿಂಗಾಯತ ಹಾಗೂ ವೀರಶೈವ ಲಿಂಗಾಯತ ಎರಡೂ ಒಂದೆ. ಹೀಗಾಗಿ ಮುಖಂಡರು ಸಮಾಜ ಒಡೆಯುವ ಕೆಲಸ ಕೈಬಿಟ್ಟು ನಾಡಿನ ಅಭಿವೃದ್ಧಿಗೆ ಶ್ರಮಿಸಲಿ’ ಎಂದರು.
ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಶ್ರೀಶೈಲಗೌಡ ಬಿರಾದಾರ ಮಾತನಾಡಿ, ‘ಗಡಿಭಾಗದ ಜೇವೂರ ಗ್ರಾಮದ ಕೈವಲ್ಯ ಧಾಮ ಮಠ ಆಧ್ಯಾತ್ಮಿಕ, ಧಾರ್ಮಿಕ ಕಾರ್ಯಗಳೊಂದಿಗೆ, ಸಮಾಜ ಸೇವೆ ಮಾಡುತ್ತಿರುವುದು ಶ್ಲಾಘನೀಯ’ ಎಂದರು.