ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲಬುರ್ಗಾ: ಬದುಕು ಬದಲಿಸಿದ ಬಟನ್ ರೋಸ್‌ ಕೃಷಿ

ಕೃಷಿಯಲ್ಲಿ ಯಶಸ್ಸು ಪಡೆದ ಹುಣಸಿಹಾಳ ಗ್ರಾಮದ ರೈತ ಸಂಗಪ್ಪ
Published 22 ಫೆಬ್ರುವರಿ 2024, 4:39 IST
Last Updated 22 ಫೆಬ್ರುವರಿ 2024, 4:39 IST
ಅಕ್ಷರ ಗಾತ್ರ

ಯಲಬುರ್ಗಾ: ಸಂಪ್ರದಾಯಿಕ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ ಈ ರೈತನಿಗೆ ಯಶಸ್ಸು ಎಂಬುದೇ ಇರುತ್ತಿರಲಿಲ್ಲ. ನೀರಿನ ಕೊರತೆ, ಸಾಲದ ಮೇಲೆ ಸಾಲ ಮಾಡುವುದೇ ಆಗಿತ್ತು. ಆದರೆ ಹನಿ ನೀರಾವರಿ ಪದ್ಧತಿ ಅಳವಡಿಸಿ ಬಟನ್ ರೋಜ್ ಬೆಳೆದು ಎರಡು ವರ್ಷದಲ್ಲಿಯೇ ಆರ್ಥಿಕ ಸಬಲರಾಗಿ ನಿರಂತರ ಆದಾಯ ಕಂಡುಕೊಳ್ಳುತ್ತಿದ್ದಾರೆ.

ತಾಲ್ಲೂಕಿನ ಹುಣಸಿಹಾಳ ಗ್ರಾಮದ ಸಂಗಪ್ಪ ಗುಳೇದ ಎಂಬ ರೈತ ಹೂವಿನ ಬೆಳೆಯನ್ನು ಅಭಿವೃದ್ಧಿಗೊಳಿಸಿ ಪ್ರಗತಿ ಕಂಡ ರೈತ ಎನಿಸಿಕೊಂಡಿದ್ದಾರೆ. ಸರ್ಕಾರದ ವಿವಿಧ ಯೋಜನೆಗಳ ಸಹಾಯ ಪಡೆದು ಕೃಷಿ ಕ್ಷೇತ್ರದಲ್ಲಿ ಶ್ರಮವಹಿಸಿ ದುಡಿದು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಸಾಲ ಮುಕ್ತನಾಗಿದ್ದಲ್ಲದೇ ಆರ್ಥಿಕ ಸಂಪತ್ತು ವೃದ್ಧಿಸಿಕೊಂಡಿದ್ದಾರೆ.

ಸುಮಾರು 8 ಕೊಳವೆಬಾವಿ ಕೊರೆಸಿದರೂ ಸಮರ್ಪಕ ನೀರು ಲಭ್ಯವಾಗದೇ ಕಂಗಾಲಾಗಿದ್ದ ರೈತ ಸಂಗಪ್ಪ, ಲಭ್ಯವಾಗಿದ್ದ ಕಡಿಮೆ ನೀರಿನಲ್ಲಿಯೇ ಹನಿ ನೀರಾವರಿ ವ್ಯವಸ್ಥೆಯ ಮೂಲಕ ಹೂವಿನ ಬೆಳೆಗೆ ಮುಂದಾಗಿದ್ದಾರೆ. ನರೇಗಾ ಯೋಜನೆಯ ನೆರವಿನಡಿಯಲ್ಲಿ ಅರ್ಧ ಎಕರೆ ಜಮೀನಿನಲ್ಲಿ ಒಟ್ಟು ಎರಡು ಸಾವಿರ ಬಟನ್ ರೋಜ್ ಸಸಿಗಳನ್ನು ನಾಟಿಮಾಡಿದ್ದಾರೆ.

ಪ್ರತಿದಿನ ಸುಮಾರು 15 ಕೆ.ಜಿಗೂ ಅಧಿಕ ಹೂವುಗಳನ್ನು ಮಾರಾಟ ಮಾಡುವ ಇವರು ಪ್ರತಿ ಕೆ.ಜಿಗೆ ₹100 ದರ ನಿಗದಿಗೊಳಿಸಿದ್ದಾರೆ. ಕುಷ್ಟಗಿ, ಹೊಸಪೇಟೆ, ಗುನ್ನಾಳ, ಮ್ಯಾದನೇರಿ ಕ್ರಾಸ್ ಇನ್ನಿತರ ಕಡೆಗಳಲ್ಲಿ ಮಾರಾಟಮಾಡುತ್ತಿದ್ದಾರೆ. ಅಲ್ಲದೇ ಇವರಿಗೆ ಕಾಯಂ ಗ್ರಾಹಕರು ಇರುವುದರಿಂದ ಮಾರಾಟದ ಸಮಸ್ಯೆ ಎದುರಾಗದೇ ಇರುವುದು ವಿಶೇಷ.

ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿರುವುದರಿಂದ ಆದಾಯದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಎರಡು ವರ್ಷದಲ್ಲಿ 5 ಲಕ್ಷಕ್ಕೂ  ಅಧಿಕ ಆದಾಯ ಕಂಡುಕೊಂಡಿದ್ದಾರೆ. ಸಸಿಗಳಿಗೆ ಆಗಾಗ ಕಾಡುವ ಕೀಟಬಾಧೆಯಿಂದ ಸಂರಕ್ಷಿಸಲು ಔಷಧ ಸಿಂಪಡಣೆ ಮತ್ತು ಇನ್ನಿತರ ಖರ್ಚುಗಳನ್ನು ನಿಭಾಯಿಸಿದರೆ ಉಳಿದಂತೆ ಯಾವುದೇ ಖರ್ಚುಗಳಿಲ್ಲ. ಒಮ್ಮೆ ನಾಟಿ ಮಾಡಿದರೆ ಮೂರು ವರ್ಷಗಳ ಕಾಲ ಅದೇ ನಾಟಿಯಿಂದಲೇ ಉತ್ಪನ್ನ ಪಡೆಯಬಹುದು ಎಂಬುದು ರೈತ ಸಂಗಪ್ಪನ ಅನುಭವದ ಮಾತು.

ಮಾರುಕಟ್ಟೆಗೆ ಕಳುಹಿಸಲು ಬಟನ್‍ರೋಜ್ ಸಂಗ್ರಹಿಸಿ ಇಟ್ಟಿರುವುದು
ಮಾರುಕಟ್ಟೆಗೆ ಕಳುಹಿಸಲು ಬಟನ್‍ರೋಜ್ ಸಂಗ್ರಹಿಸಿ ಇಟ್ಟಿರುವುದು

ನರೇಗಾ ಯೋಜನೆ ಸದುಪಯೋಗ ಮಾಡಿಕೊಂಡು ರೈತ ಸಂಗಪ್ಪ ಗುಳೇದ ಅವರು ಬಟನ್‌ ರೋಜ್‌ ಕೃಷಿಯ ಮೂಲಕ ಆರ್ಥಿಕ ಸಬಲರಾಗಿದ್ದಾರೆ. ಕಡಿಮೆ ನೀರಿನಲ್ಲಿ ಅಧಿಕ ಇಳುವರಿ ಹಾಗೂ ನಿರಂತರ ಆದಾಯದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು ಇತರರಿಗೆ ಮಾದರಿಯಾಗಿದ್ದಾರೆ

-ಲಿಂಗನಗೌಡ ಪಾಟೀಲ ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ ಯಲಬುರ್ಗಾ

ತರಕಾರಿ ಬೆಳೆಯುತ್ತಿದ್ದಾಗ ಅಷ್ಟೊಂದು ಆದಾಯ ಸಿಗಲಿಲ್ಲ ತೋಟಗಾರಿಕೆ ಅಧಿಕಾರಿಗಳ ಸಲಹೆಯಿಂದಾಗಿ ಬಟನ್ ರೋಜ್ ಕೃಷಿಯತ್ತ ತೋರಿದ ಒಲವು ಈಗ ಬದುಕಿನ ಚಿತ್ರಣವೇ ಬದಲಾಗಿದೆ.

-ಸಂಗಪ್ಪ ಗುಳೇದ ಹೂವು ಬೆಳೆಗಾರ ಹುಣಸಿಹಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT