ಗಂಗಾವತಿ: ತಾಲ್ಲೂಕಿನ ಸಾಣಾಪುರ, ಹನುಮನಹಳ್ಳಿ, ಆನೆಗೊಂದಿ, ರಂಗಾಪುರ ಗ್ರಾಮಗಳಲ್ಲಿನ ಅನಧಿಕೃತ ರೆಸಾರ್ಟ್ಗಳಲ್ಲಿ ಹೊಸವರ್ಷದ ನಿಮಿತ್ತ ರೇವ್ ಪಾರ್ಟಿ, ಅಕ್ರಮ ಮದ್ಯ ಸೇವನೆ, ಅನೈತಿಕ ಚಟುವಟಿಕೆಗಳು ನಡೆಯಲಿದ್ದು, ಇವುಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಕರವೇ ಸಂಘಟನೆ ಸದಸ್ಯರು ತಹಶೀಲ್ದಾರ್ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿದರು.
ಕರವೇ (ಎಚ್. ಶಿವರಾಮೇಗೌಡ ಬಣ) ತಾಲ್ಲೂಕು ಅಧ್ಯಕ್ಷ ಯಮನೂರ ಭಟ್ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ತಾಲ್ಲೂಕಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯ ಸಿದ್ಧತೆಗಳು ನಡೆಯುತ್ತಿವೆ. ಇದರ ಭಾಗವಾಗಿ ಸಾಣಾಪುರ, ಹನುಮನಹಳ್ಳಿ ಭಾಗದಲ್ಲಿ ಅನಧಿಕೃತ ರೆಸಾರ್ಟ್ಗಳಲ್ಲಿ ಪಾರ್ಟಿ ಆಯೋಜನೆ ಮಾಡಿಕೊಂಡಿದ್ದಾರೆ. ವಿದೇಶಿಯರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ಸಾಧ್ಯತೆ ಇದೆ. ಈಗಾಗಲೇ ರಾಜ್ಯದಲ್ಲಿ ಕೊರೋನಾ ಭೀತಿ ಹೆಚ್ಚಾಗಿದ್ದು, ಮೋಜು- ಮಸ್ತಿಗೆ ಆಗಮಿಸುವ ಪ್ರವಾಸಿಗರಿಂದ ಕೊರೋನಾ ಸೋಂಕು ತಗಲುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ತಾಲ್ಲೂಕು ಆಡಳಿತ ಎಚ್ಚೆತ್ತು ಅನಧಿಕೃತ ರೆಸಾರ್ಟ್ಗಳಲ್ಲಿ ನಡೆಯುವ ಪಾರ್ಟಿಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ತಹಶೀಲ್ದಾರ್ ಕಚೇರಿ ಶಿರಸ್ತೆದಾರ ರವಿಕುಮಾರ ಅವರಿಗೆ ಮನವಿ ಸಲ್ಲಿಸಿದರು.
ಸಂಘಟನೆ ನಗರ ಘಟಕ ಅಧ್ಯಕ್ಷ ಹನುಮೇಶ ಕುರುಬರ, ಉಪಾಧ್ಯಕ್ಷ ಅಂಬಾಶ, ಸುನಿಲಕುಮಾರ ಕುಲಕರ್ಣಿ, ಪವನಕುಮಾರ ಗಡ್ಡಿ, ಸುರೇಶ ಚನ್ನಳ್ಳಿ, ಹುಲುಗಪ್ಪ ಹಾರೆಗಾರ, ಮುತ್ತುರಾಜ ಕುಷ್ಟಗಿ, ವಿಜಯಕುಮಾರ ಸಮಗಾರ, ಮಾರುತಿ ಇದ್ದರು.