ಗಂಗಾವತಿ: ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡುವಂತೆ ಆಗ್ರಹಿಸಿ ತಾಲ್ಲೂಕಿನ ಢಣಾಪೂರ, ಹೆಬ್ಬಾಳ ಗ್ರಾಮದ ಕೂಲಿಕಾರರು ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ನಗರದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಸಂಘಟನೆಯ ಅಧ್ಯಕ್ಷ ಶಿವಣ್ಣ ಬೆಣಕಲ್ ಮಾತನಾಡಿ, ಢಣಾಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹೆಬ್ಬಾಳ ಗ್ರಾಮದ ಕೂಲಿಕಾರರಿಗೆ ಕೆಲಸ ಇಲ್ಲದೆ, ಕುಟುಂಬ ನಿರ್ವಹಣೆಮಾಡುವುದು ಕಷ್ಟವಾಗುತ್ತಿದೆ. ಕೆಲಸಕ್ಕಾಗಿ ಅರ್ಜಿ ಸಲ್ಲಿಸಿ 25 ದಿನಗಳಾಗಿವೆ. ಇದುವರೆಗೂ ಕೂಲಿಕಾರರಿಗೆ ಕೆಲಸವನ್ನು ನೀಡಿಲ್ಲ. ಹಾಗಾಗಿ ಕೂಲಿಕಾರರಿಗೆ ಕೆಲಸವನ್ನು ನೀಡಬೇಕು ಎಂದು ಒತ್ತಾಯಿಸಿ ಧರಣಿಯನ್ನು ನಡೆಸುತ್ತಿದ್ದೇವೆ ಎಂದರು.
ಸಂಘಟನೆಯ ಕಾರ್ಯದರ್ಶಿ ಶ್ರೀನಿವಾಸ್ ಹೊಸಳ್ಳಿ, ಕೂಲಿಕಾರರಾದ ಹನುಮಂತಪ್, ಲಿಂಗಪ್ಪ, ಬಾಲಮ್ಮ, ಫಕೀರಮ್ಮ, ಸಣ್ಣ ದುರುಗಮ್ಮ, ವಿರೇಶ್, ತಾಯಪ್ಪ, ಗಂಗಮ್ಮ, ಜ್ಞಾನೇಶ್,ಶಿವಣ್ಣ ಸೇರಿದಂತೆ ಇತರರು ಇದ್ದರು.