ಮುನಿರಾಬಾದ್: ಹೋಬಳಿ ಕೇಂದ್ರ ಹಿಟ್ನಾಳ ಗ್ರಾಮದ ಗ್ರಾಮದೇವತೆ ಶ್ರೀದುರ್ಗಾ ದೇವಿಯ ಮೂರನೇ ವರ್ಷದ ಜಾತ್ರಾ ಮಹೋತ್ಸವದ ಪ್ರಯುಕ್ತ ಸೋಮವಾರ ದೇವಿಯಮೂರ್ತಿ ಮೆರವಣಿಗೆ ನಡೆಯಿತು.
ಜಾತ್ರಾ ಮಹೋತ್ಸವದ ಪ್ರಯುಕ್ತ ಶುಕ್ರವಾರ ದೇವಿಗೆ ಕಂಕಣಧಾರಣೆ, ಶನಿವಾರ ವಸ್ತ್ರಾಲಂಕಾರ, ಭಾನುವಾರ ಪುಷ್ಪಾಲಂಕಾರ ನಡೆಯಿತು. ಸೋಮವಾರ ಬೆಳಿಗ್ಗೆ ಮಂಗಳವಾದ್ಯ, ಪೂರ್ಣಕುಂಭ, ಕಳಸದೊಂದಿಗೆ ಗ್ರಾಮದ ಮಹಿಳೆಯರು ಸಂಭ್ರಮದಿಂದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಬಿಸಿಲಿನಿಂದ ಬಸವಳಿದ ಕುಂಭ ಕಳಸಹೊತ್ತ ಸುಮಂಗಲಿಯರಿಗೆ ದಾರಿ ಮಧ್ಯೆ ಹಣ್ಣಿನ ಪಾನಕ(ತಂಪುಪಾನೀಯ)ನೀಡಿ ಕೆಲವರು ದಾಹತೀರಿಸಿಕೊಂಡರು.
ದೇವಿಯ ವಿಗ್ರಹ ಪುಷ್ಪಾಲಂಕಾರದಿಂದ ಕಂಗೊಳಿಸಿತು. ಬೆಳಿಗ್ಗೆ ನಡೆದ ವಿಶೇಷ ಪೂಜೆಯಲ್ಲಿ ಗ್ರಾಮದ ಗಣ್ಯರು ಪಾಲ್ಗೊಂಡರು. ಮಹಿಳೆಯರು ದೇವಿಯ ದರ್ಶನದ ನಂತರ ಮನೆಯಲ್ಲಿ ತಯಾರಿಸಿದ ಹೋಳಿಗೆ, ಕಡಬು ನೈವೇದ್ಯದ ರೂಪದಲ್ಲಿ ದೇವಿಗೆ ಸಮರ್ಪಿಸಿದರು. ಸ್ಥಳೀಯ ಮತ್ತು ವಿವಿಧ ಗ್ರಾಮಗಳಿಂದ ಆಗಮಿಸಿದ ಜನ ಮೆರವಣಿಗೆ ನಂತರ ನಡೆದ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು.
ಮಂಗಳವಾರ(ಫೆ.18)ದೇವಿಗೆ ಪಂಚಾಮೃತಅಭಿಷೇಕ, ಉಡಿತುಂಬುವಕಾರ್ಯ, ಮಧ್ಯಾಹ್ನ ಮಹಾಪ್ರಸಾದ, ಸಂಜೆ 6ಕ್ಕೆ ಪಲ್ಲಕ್ಕಿ ಉತ್ಸವ ನಡೆಯಲಿದೆ.