ಕೊಪ್ಪಳ: ಪ್ರತಿಯೊಬ್ಬ ಮಗುವಿನೊಳಗೆ ಸೃಜನಶೀಲತೆ ಸುಪ್ತವಾಗಿರುತ್ತದೆ. ಅದನ್ನು ಅಭಿವ್ಯಕ್ತಿಗೊಳಿಸಲು ವಸ್ತು ಪ್ರದರ್ಶನ ಮೇಳಗಳಂತಹ ವೇದಿಕೆ ಕಲ್ಪಿಸುವುದು ಅತ್ಯಂತ ಅಗತ್ಯ ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷ ರಮೇಶ ಮುದ್ಲಾಪುರ ಹೇಳಿದರು.
ತಾಲ್ಲೂಕಿನ ಗುಳದಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ‘ರಾಷ್ಟ್ರೀಯ ವಿಜ್ಞಾನ ದಿನ’ದ ಅಂಗವಾಗಿ ನಡೆದ ವಿಜ್ಞಾನ ವಿಷಯದ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಪಠ್ಯ ಜ್ಞಾನದ ಜತೆಗೆ ಸಹಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಕುರಿತ ಜ್ಞಾನವನ್ನು ನೀಡುವುದು ಶಿಕ್ಷಣದ ಮೂಲತತ್ವವಾಗಿದೆ. ಪಠ್ಯೇತರ ಚಟುವಟಿಕೆಗಳಲ್ಲಿ ವಸ್ತು ಪ್ರದರ್ಶನ ಕೂಡ ಮಹತ್ವದ್ದಾಗಿದ್ದು, ಇದನ್ನು ಹಮ್ಮಿಕೊಳ್ಳುವುದರ ಮೂಲಕ ಮಕ್ಕಳಲ್ಲಿರುವ ವಿಶೇಷ ಸೃಜನಶೀಲತೆಯನ್ನು ಅಭಿವ್ಯಕ್ತಿಗೊಳಿಸಲು ಸೂಕ್ತ ವೇದಿಕೆ ಕಲ್ಪಿಸಿರುವುದು ಅತ್ಯಂತ ಹೆಮ್ಮೆಯ ವಿಷಯ. ಮಕ್ಕಳು ಇಂತಹ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಶಾಲೆಯ ಮುಖ್ಯಶಿಕ್ಷಕ ಭೀಮಣ್ಣ ಹೂಗಾರಅಧ್ಯಕ್ಷತೆ ವಹಿಸಿ ಮಾತನಾಡಿ, ವ್ಯಕ್ತಿಯಲ್ಲಿರುವ ಸೃಜನಶೀಲತೆಯು ಆ ವ್ಯಕ್ತಿಯನ್ನು ಸಂಪನ್ಮೂಲ ವ್ಯಕ್ತಿಯನ್ನಾಗಿ ಮಾಡುತ್ತದೆ. ಎಲ್ಲ ಕ್ಷೇತ್ರದ ಮೇಲಿನ ನಿಮ್ಮ ಸೃಜನಶೀಲತೆಯನ್ನು ಇಂತಹ ವೇದಿಕೆಯ ಮೂಲಕ ಗುರುತಿಸಿಕೊಳ್ಳಬೇಕು ಎಂದು ಮಕ್ಕಳಿಗೆ ಕರೆ ನೀಡಿದರು.
ಬಳಿಕ ಎಲ್ಲ ಮಕ್ಕಳು ಪ್ರದರ್ಶನದ ಮಾದರಿಗಳನ್ನು ವಿವರಣೆಯ ಮೂಲಕ ಪರಿಚಯಿಸಿದರು.ಗ್ರಾಮದ ಮುಖಂಡರಾದ ದೊಡ್ಡಬಸಪ್ಪ ಯಡ್ಡೋಣಿ, ಹನುಮಂತಪ್ಪ ಹುಲಿಗಿ, ಸಂಜೀವಪ್ಪ ಮಾಸ್ತರ, ಎಸ್.ಡಿ.ಎಂ.ಸಿ ಪದಾಧಿಕಾರಿಗಳು ಭಾಗವಹಿಸಿ, ಮಕ್ಕಳ ವಿವಿಧ ವಿಜ್ಞಾನ ಪ್ರಯೋಗಗಳನ್ನು ವೀಕ್ಷಿಸಿದರು.