ಕನಕಗಿರಿ: ಇಲ್ಲಿನ ಜನರ ಆರಾಧ್ಯ ದೈವ ಕನಕಾಚಲಪತಿ, ರಾಜ್ಯ ಸರ್ಕಾರ ಇತ್ತೀಚೆಗೆ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ ಬಸವಣ್ಣ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹೀಗೆ ಹಲವಾರು ಮಹನೀಯರ ಚಿತ್ರಗಳು ಹೂ, ಹಣ್ಣುಗಳಲ್ಲಿ ಕಂಗೊಳಿಸಿದವು. ಇವು ಆಕರ್ಷಣೆಯ ಕೇಂದ್ರ ಬಿಂದು ಕೂಡ ಆದವು.
ಉತ್ಸವದ ಅಂಗವಾಗಿ ತೋಟಗಾರಿಕಾ ಇಲಾಖೆ ಆಯೋಜಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ ಕಂಡುಬಂದ ಚಿತ್ರಣವಿದು. ಎತ್ತರದಿಂದ ಹರಿಯುವ ಜಲಪಾತದ ನೋಟ ಆರಂಭದಲ್ಲಿಯೇ ಗಮನ ಸೆಳೆಯುತ್ತದೆ. ಕಲ್ಲಂಗಡಿಗಳಲ್ಲಿ ಊರಿನ ಹೆಸರು, ಮಹನೀಯರ ಭಾವಚಿತ್ರ, ತರಹೇವಾರಿ ಹೂಗಳು, ಹಣ್ಣುಗಳು ಇದ್ದವು.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಈ ಪ್ರದರ್ಶನಕ್ಕೆ ಭೇಟಿ ನೀಡಿ ತೋಟಗಾರಿಕಾ ಇಲಾಖೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಧ್ಯಭಾಗದಲ್ಲಿ ವಿವಿಧ ಹೂಗಳಿಂದ ಮಂಟಪ ನಿರ್ಮಿಸಿದ್ದು ಆಕರ್ಷಣೆ ಎನಿಸಿದೆ.
ಇದೇ ವೇಳೆ ಹಲವು ಸಚಿವರು ಪುಸ್ತಕ ಉಡುಗೊರೆ ನೀಡಿದರು. ಸೌರಶಕ್ತಿಯನ್ನು ಬಳಸಿಕೊಂಡು ವಿದ್ಯುತ್ ಉತ್ಪಾದನೆ ಮಾಡುವ ವಿಧಾನ, ಪವರ್ ಹೌಸ್, ಮಾದರಿ ಶಿಥಿಲ ಗೃಹ, ದ್ರಾಕ್ಷಿ, ಪೇರಲ, ಕಲ್ಲಂಗಡಿ ಹೀಗೆ ಅನೇಕ ಹಣ್ಣುಗಳು ನೋಡುಗರ ಗಮನ ಸೆಳೆದವು.