ಕುಕನೂರು (ಕೊಪ್ಪಳ ಜಿಲ್ಲೆ): ಅವಧಿಗೂ ಮುನ್ನವೇ ಮಾರುಕಟ್ಟೆಗೆ ಹಣ್ಣುಗಳ ರಾಜ ಮಾವಿನ ಹಣ್ಣು ಕಾಲಿಟ್ಟಿದ್ದು, ರೈತರ ಹಾಗೂ ಮಾವು ಪ್ರಿಯರ ಮೊಗದಲ್ಲಿ ಮಂದಹಾಸ ಮೂಡಿದೆ.
ಪಟ್ಟಣದ ಮಾರುಕಟ್ಟೆಗಳಲ್ಲಿ ಮಾವಿನ ಹಣ್ಣುಗಳು ಎಲ್ಲರನ್ನೂ ಸೆಳೆಯುತ್ತಿದ್ದು. ಸಾಮಾನ್ಯವಾಗಿ ಏಪ್ರಿಲ್ ಕೊನೆಗೆ ಅಥವಾ ಮೇನಲ್ಲಿ ಬರುವ ಮಾವಿನ ಹಣ್ಣು ಈ ಬಾರಿ ಅವಧಿಗೆ ಮುನ್ನವೇ ಮಾರುಕಟ್ಟೆಗೆ ಬಂದಿದೆ. ಬಾದಾಮಿ, ರಸಪೂರಿ, ಸಿಂಧೂರ, ನೀಲಂ ತೋತಾಪುರಿ, ಮಲ್ಲಿಕಾ ಹಣ್ಣುಗಳಿಗೆ ಗ್ರಾಹಕರು ಮನಸೋತಿದ್ದಾರೆ.
ಸ್ಥಳೀಯ ವ್ಯಾಪಾರಿಗಳು ಉತ್ಸಾಹದಿಂದ ಮಾರುಕಟ್ಟೆಯಲ್ಲಿ ಖರೀದಿ ನಡೆಸಿದರು. ಮಾರುಕಟ್ಟೆಯಲ್ಲಿ ಹಣ್ಣು ಜನರಿಗೆ ಸಿಗಲಿದೆ
ಮೂರರಿಂದ ನಾಲ್ಕು ದಿನಗಳಲ್ಲಿ ಹೆಚ್ಚಿನ ಪ್ರಮಾಣದ ಹಣ್ಣು ಮಾರುಕಟ್ಟೆಗೆ ಆವಕವಾಗಲಿದೆ. ವಹಿವಾಟು ಸಹ ಬಿರುಸುಗೊಳ್ಳಲಿದೆ’ ಎಂದು ಮಾವಿನ ಹಣ್ಣಿನ ವ್ಯಾಪಾರಿ ಮುತ್ತಣ ಭಜೇಂತ್ರಿ ತಿಳಿಸಿದರು.
ಗುಣಮಟ್ಟದ ಹಣ್ಣಿಲ್ಲ: ‘ಮಳೆಯ ಕೊರತೆ, ಬರದ ಹೊಡೆತಕ್ಕೆ ಮಾರುಕಟ್ಟೆಗೆ ಗುಣಮಟ್ಟದ ಮಾವು ಬರುತ್ತಿಲ್ಲ. ಕಾಯಿ ಬಲಿಯುವುದಕ್ಕೂ ಮುನ್ನವೇ ಕೊಯ್ಲು ಮಾಡಿಕೊಂಡು ತರುತ್ತಿರುವುದೇ ಹೆಚ್ಚಿದೆ. ಇದನ್ನೇ ಸ್ಥಳೀಯ ವ್ಯಾಪಾರಿಗಳು ಮುಗಿಬಿದ್ದು ಖರೀದಿಸುತ್ತಿದ್ದಾರೆ.
ಈ ಕಾಯಿಯನ್ನು ಹಣ್ಣು ಮಾಡಲು ಸಹ ರಾಸಾಯನಿಕ ಸಿಂಪಡಣೆಯ ತಂತ್ರಕ್ಕೆ ವ್ಯಾಪಾರಿಗಳು ಮಾರು ಹೋಗಿದ್ದಾರೆ. ಇಂಥಹ ಹಣ್ಣು ಹೆಚ್ಚು ದಿನ ಬಾಳಿಕೆ ಬರಲ್ಲ. ತಿನ್ನಲು ಯೋಗ್ಯವಾಗಿರಲ್ಲ’ ಎಂದು ಕೃಷಿ ಅಧಿಕಾರಿಯೊಬ್ಬರು ತಿಳಿಸಿದರು.
‘ಮಾವಿನ ಮರದಲ್ಲೇ ಬಲಿತ ಮಾವಿನ ಕಾಯಿ ಕೊಯ್ಲು ಮಾಡಿ, ವ್ಯವಸ್ಥಿತವಾಗಿ ಗಾಳಿಯಾಡದಂತೆ ಒಂದೆಡೆ ಬಟ್ಟಿಯಲ್ಲಿ ಹಾಕಿ, ನಾಲ್ಕೈದು ದಿನದ ಬಳಿಕ ಅವನ್ನು ತೆಗೆದರೆ, ರುಚಿಯಾದ ಮಾವಿನ ಹಣ್ಣು ಸವಿಯಲು ಸಿದ್ಧ. ಈ ರೀತಿಯ ಹಣ್ಣು ಮಾರುಕಟ್ಟೆಗೆ ಬರಲು ಇನ್ನೂ ಕೊಂಚ ದಿನ ಸಮಯ ಬೇಕಿದೆ’ ಎಂದು ಅವರು ಹೇಳಿದರು.