ಅಳವಂಡಿ: ರೈತರ ಬೆಳೆಗೆ ಯೋಗ್ಯ ಬೆಲೆ ಸಿಗಬೇಕು ಎಂದು ಸರ್ಕಾರ ಬೆಂಬಲ ಬೆಲೆ ಯೋಜನೆ ಅಡಿ ಖರೀದಿ ಕೇಂದ್ರ ತೆರೆದಿದೆ. ರೈತರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಂದಾನಪ್ಪ ಡಂಬಳ ತಿಳಿಸಿದರು.
ಇಲ್ಲಿಗೆ ಸಮೀಪದ ಘಟ್ಟಿರಡ್ಡಿಹಾಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಸರ್ಕಾರದ ಬೆಂಬಲ ಬೆಲೆ ಯೋಜನೆಯ ಕಡಲೆ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಿರಣ ಅಂಗಡಿ ಮಾತನಾಡಿ,‘ಪ್ರಸಕ್ತ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಉತ್ತಮ ಗುಣಮಟ್ಟದ ಕಡಲೆಯನ್ನು ಪ್ರತಿ ಕ್ವಿಂಟಲಿಗೆ ₹5,335 ದರದಲ್ಲಿ ಖರೀದಿಸಲಾ ಗುತ್ತಿದೆ. ಎಕರೆಗೆ 4 ಕ್ವಿಂಟಲಿನಂತೆ ಗರಿಷ್ಠ 15 ಕ್ವಿಂಟಲ್ ಕಡಲೆ ಖರೀದಿಸಲಾಗುತ್ತಿದೆ’ ಎಂದರು.
ನಿರ್ದೆಶಕರಾದ ಶಿವನಗೌಡ ಅಲ್ಲಿಪುರ, ಸುರೇಶ, ಸಂಗರಡ್ಡಿ, ರೈತರಾದ ಸುರೇಶ ಡಂಬಳ, ಶೇಖರಪ್ಪ ಚನ್ನಳ್ಳಿ, ಕೊಟ್ರಪ್ಪ ಮುಂಡರಗಿ, ಬಸವರಾಜ ವಾಲಿಕಾರ, ಗ್ರೇಡರ್ ಬಸವರಾಜ ಬಸಾಪುರ ಹಾಗೂ ಇತರರು ಇದ್ದರು.