ಕೊಪ್ಪಳ: ಜನನ ಹಾಗೂ ಮರಣ ನೋಂದಣಿ ಕಾಯ್ದೆಯಲ್ಲಿ ಮಾಡಿರುವ ತಿದ್ದುಪಡಿಯನ್ನು ರಾಜ್ಯ ಸರ್ಕಾರ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಜಿಲ್ಲಾ ವಕೀಲರ ಸಂಘದ ಸದಸ್ಯರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ಮಾಡಿದರು.
ನಗರದ ಅಶೋಕ ವೃತ್ತದಲ್ಲಿ ಪ್ರತಿಭಟಿಸಿದ ವಕೀಲರು ‘ರಾಜ್ಯ ಸರ್ಕಾರ ಜುಲೈ 18ರಂದು ಜನನ ಹಾಗೂ ಮರಣ ನೋಂದಣಿ ಕಾಯ್ದೆಗೆ ತಿದ್ದುಪಡಿ ಮಾಡಿದ್ದು, ಹೊಸ ನಿಯಮದ ಪ್ರಕಾರ ಇದಕ್ಕೆ ಸಂಬಂಧಿಸಿದ ಅರ್ಜಿಯನ್ನು ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ ಸಲ್ಲಿಸಬೇಕು ಎಂದು ಹೇಳಿದೆ. ಇದರಿಂದ ಜನರಿಗೆ ತೊಂದರೆಯಾಗುತ್ತದೆ. ಸಾಕಷ್ಟು ವಿಳಂಬವೂ ಆಗುತ್ತದೆ. ಆದ್ದರಿಂದ ಸರ್ಕಾರ ತನ್ನ ನಿರ್ಧಾರ ವಾಪಸ್ ಪಡೆಯಬೇಕು’ ಎಂದು ಆಗ್ರಹಿಸಿದರು.
‘ಮೊದಲಿನ ಕಾಯ್ದೆಯ ಪ್ರಕಾರ ಜೆೆಂಎಫ್ಸಿ ನ್ಯಾಯಾಲಯದ ವಿಚಾರಣಾ ಅಧಿಕಾರಿ ವ್ಯಾಪ್ತಿಗೆ ಜನನ ಹಾಗೂ ಮರಣ ನೋಂದಣಿ ಒಪ್ಪಿಸಬೇಕು. ವಕೀಲರ ದೃಷ್ಟಿಯಿಂದ ಸರ್ಕಾರ ಆದಷ್ಟು ಬೇಗನೆ ತೀರ್ಮಾನ ಕೈಗೊಳ್ಳಬೇಕು’ ಎಂದು ಕೋರಿದರು.
ಈ ಕುರಿತು ಬರೆದ ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಲಾಯಿತು.
ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ವಿ. ಕಣವಿ, ಪ್ರಧಾನ ಕಾರ್ಯದರ್ಶಿ ಬಿ.ವಿ. ಸಜ್ಜನ, ಪದಾಧಿಕಾರಿಗಳಾದ ವಿ.ಎಂ. ಭೂಸನೂರಮಠ, ವಿ.ಜಿ. ಕಟ್ಟಿಮನಿ, ಕೆ.ಐ. ಹಿರೇಮಠ, ಬಿ.ವಿ. ಸಜ್ಜನ, ಡಿ. ಲೋಕೇಶ, ಪಿ.ವಿ. ಪರವತಗೌಡ, ಎಂ.ಬಿ. ಗೌಡರ, ಬಿ.ಎಂ. ವಾಲೀಕಾರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.