ಗೃಹಪ್ರವೇಶ ಮಾಡಿದ ರೆಡ್ಡಿ ಕುಟುಂಬ

ಗಂಗಾವತಿ: ಮಾಜಿ ಸಚಿವ ಬಳ್ಳಾರಿಯ ಜನಾರ್ದನ ರೆಡ್ಡಿ ಇಲ್ಲಿನ ಕನಕಗಿರಿ ರಸ್ತೆಯಲ್ಲಿನ ಕ್ರಿಯೇಟಿವ್ ಲೇಔಟ್ ಪಾರ್ಕಿನಲ್ಲಿ ಇತ್ತೀಚೆಗೆ ಖರೀದಿಸಿರುವ ಮೂರು ಮನೆಗಳಲ್ಲಿ ಅವರ ಕುಟುಂಬ ಸದಸ್ಯರು ಬುಧವಾರ ಪೂಜಾ ವಿಧಾನಗಳನ್ನು ನೆರವೇರಿಸಿದರು.
ಗೃಹಪ್ರದೇಶ ಕಾರ್ಯಕ್ರಮದಲ್ಲಿ ಜನಾರ್ದನ ರೆಡ್ಡಿ ಪಾಲ್ಗೊಂಡಿರಲಿಲ್ಲ. ಮನೆಯ ಮಹತ್ವದ ಕಾರ್ಯಕ್ರಮವನ್ನು ಬಿಟ್ಟು ಅವರು ಎಲ್ಲಿಗೆ ಹೋಗಿದ್ದಾರೆ ಎನ್ನುವ ವಿಷಯವೂ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ತಲಾ ₹60 ಲಕ್ಷದಂತೆ ಮೂರು ಮನೆಗಳನ್ನು ಖರೀದಿಸಿದ್ದಾರೆ. ಅರುಣಾ ಹಿಂದೂ ಸಂಪ್ರದಾಯದಂತೆ ಪೂಜೆ ಸಲ್ಲಿಸಿದರು.
ರೆಡ್ಡಿ ಗಂಗಾವತಿಯಲ್ಲಿ ಮನೆ ಖರೀದಿಸಿದ್ದಾಗ ’ನಿಮಗೆಲ್ಲರಿಗೂ ತಿಳಿಸಿಯೇ ಗೃಹಪ್ರವೇಶ’ ಮಾಡುವೆ ಎಂದಿದ್ದರು. ಏಕಾಏಕಿ ಅವರ ಪತ್ನಿ ಅರುಣಾಲಕ್ಷ್ಮಿ ಬುಧವಾರ ಬೆಳಗಿನ ಜಾವ ನಾಲ್ಕು ಗಂಟೆಯಿಂದಲೇ ಸ್ಥಳೀಯಯರೊಂದಿಗೆ ಹೋಮ, ಗೋಪೂಜೆ ಮಾಡಿದರು. ಅಡುಗೆ ಕೋಣೆಯಲ್ಲಿ ಹಾಲು ಉಕ್ಕಿಸಿ ಧಾರ್ಮಿಕ ಕಾರ್ಯಗಳನ್ನು ಮುಗಿಸಿದರು.
ಗೈರು: ರೆಡ್ಡಿ ಕೆಲ ದಿನಗಳ ಹಿಂದೆ ಇಲ್ಲಿನ ನಗರಸಭೆ ಸದಸ್ಯ ಸೇರಿದಂತೆ ಕೆಲ ಬಿಜೆಪಿ ಮುಖಂಡರ ಮನೆಗಳಿಗೆ ಭೇಟಿ ನೀಡಿದ್ದರು. ಆದರೆ ಅವರು ಯಾರೂ ಗೃಹಪ್ರವೇಶಕ್ಕೆ ಬರಲಿಲ್ಲ.
ರಾಜಕೀಯ ನಡೆ ಅವರೇ ಹೇಳುತ್ತಾರೆ: ಅರುಣಾ ಲಕ್ಷ್ಮೀ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ ‘ಪತಿ ಬಳ್ಳಾರಿ ಭೇಟಿಗೆ ನ್ಯಾಯಾಲಯ ಅನುಮತಿ ನೀಡದ ಕಾರಣ ಬೆಂಗಳೂರಿನಲ್ಲಿ ವಾಸವಾಗಿದ್ದರು. ಕುಟುಂಬದವರು ಹಾಗೂ ಸಂಬಂಧಿಕರು ಮೇಲಿಂದ ಮೇಲೆ ಬೆಂಗಳೂರಿಗೆ ಹೋಗಲು ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ಗಂಗಾವತಿಯಲ್ಲಿ ಮನೆ ಖರೀದಿಸಿದ್ದಾರೆ. ರಾಜಕೀಯ ನಡೆ ಬಗ್ಗೆ ಅವರೇ ಹೇಳುತ್ತಾರೆ’ ಎಂದು ಕುತೂಹಲ ಉಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.