ಕುಷ್ಟಗಿ: ‘ದೊಡ್ಡನಗೌಡರನ್ನು ಗೆಲ್ಲಿಸಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಅವರನ್ನು ಸಚಿವರನ್ನಾಗಿಸುವ ಕೆಲಸ ವನ್ನು ನಮಗೆ ಬಿಡಿ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಹೇಳಿದರು.
ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಅಂಗವಾಗಿ ಪಟ್ಟಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ ‘ಶ್ರಮಪಟ್ಟರೆ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ನಿಶ್ಚಿತ. ಪ್ರತಿ ಬೂತ್ನಲ್ಲಿಯೂ ಅತಿ ಹೆಚ್ಚು ಮತ ಬರುವಂತೆ ಕೆಲಸ ಮಾಡಬೇಕು. ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಜಾತಿ ಬೇಧ ಮಾಡದೆ ಯೋಜನೆಗಳನ್ನು ಜಾರಿಗೊಳಿಸಿವೆ ಎಂದು ಅವರು ಹೇಳಿದರು.
‘ಶಾಸಕ ಅಮರೇಗೌಡ ಬಯ್ಯಾಪುರ ಬಳಿ ಹಣ ಇರಬಹುದು. ಆದರೆ, ಹಣ ಇಲ್ಲದಿದ್ದರೂ ದೊಡ್ಡನಗೌಡ ಹೃದಯ ಶ್ರೀಮಂತಿಕೆ ಉಳ್ಳವರು. ಮತ್ತೆ ಈ ಬಾರಿ ರಾಜ್ಯ ಮತ್ತು ದೇಶದಲ್ಲಿ ಡಬಲ್ ಎಂಜಿನ್ ಸರ್ಕಾರ ಬರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಚಿವ ಬಿ.ಶ್ರೀರಾಮುಲು ಮಾತನಾಡಿ,‘ಇಲ್ಲಿಯ ಮತದಾರರು ಈ ಹಿಂದೆ ದೊಡ್ಡನಗೌಡ ಪಾಟೀಲರನ್ನು ಎರಡು ಬಾರಿ ಗೆಲ್ಲಿಸಿದರೂ ನಮ್ಮ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರಲಿಲ್ಲ. ಈ ಬಾರಿ ಅವರನ್ನು ಗೆಲ್ಲಿಸುವ ಮೂಲಕ ಬಿಜೆಪಿ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡಬೇಕು’ ಎಂದು ಅವರು ಹೇಳಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ದೊಡ್ಡನಗೌಡ ಪಾಟೀಲ, ಸಂಸದ ಸಂಗಣ್ಣ ಕರಡಿ, ಸಚಿವರಾದ ಹಾಲಪ್ಪ ಆಚಾರ, ಆನಂದ ಸಿಂಗ್, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಹಳ್ಳೂರು, ಶರಣು ತಳ್ಳಿಕೇರಿ, ಕೆ.ಮಹೇಶ ಹಾಗೂ ನವೀನ್ ಗುಳಗಣ್ಣನವರ ಇದ್ದರು.
ಪ್ರಾರಂಭದಲ್ಲಿ ಡಾ.ಅಂಬೇಡ್ಕರ್ ಫಲಕಕ್ಕೆ ಸಚಿವ ಹಾಲಪ್ಪ ಆಚಾರ, ಸಂಸದ ಸಂಗಣ್ಣ ಪುಷ್ಪಾರ್ಚನೆ ಮಾಡಿದರು.
ನಂತರ ಪ್ರಮುಖ ಬೀದಿಗಳಲ್ಲಿ ವಿಜಯ ಸಂಕಲ್ಪ ಯಾತ್ರೆ ನಡೆಯಿತು. ಉರಿ ಬಿಸಿಲಿನಲ್ಲೂ ಕುಂಭ ಹೊತ್ತ ನೂರಾರು ಮಹಿಳೆಯರು ಹಾಗೂ ಡೊಳ್ಳು ಇತರೆ ಕಲಾ ತಂಡದವರು ಗಮನಸೆಳೆದರು.
ದಾರಿಯುದ್ದಕ್ಕೂ ಸಿ.ಟಿ.ರವಿ ಮೆರವಣಿಗೆಯಲ್ಲಿದ್ದವರ ಮೇಲೆ ಪುಷ್ಪ ಎರಚುವ ಮೂಲಕ ಹುರು ದುಂಬಿಸಿದರು.