ಹುಲಿಹೈದರ (ಕನಕಗಿರಿ): ಸಮೀಪದ ಹುಲಿಹೈದರ ಗ್ರಾಮದ ಗ್ರಂಥಾಲಯದಲ್ಲಿ ಹೆಚ್ಚಿನ ಪುಸ್ತಕಗಳನ್ನು ಓದಿದ ಇಬ್ಬರು ವಿದ್ಯಾರ್ಥಿಗಳನ್ನು ಗೌರವಿಸುವ ಮೂಲಕ ಶುಕ್ರವಾರ ವಿಶ್ವ ಪುಸ್ತಕ ದಿನಾಚರಣೆ ಆಚರಿಸಲಾಯಿತು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಡಿ.ಮೋಹನ್ ಮಾತನಾಡಿ,‘ಬಂಧುಗಳು, ಗುರುಗಳು, ಸಹಪಾಠಿಗಳು ಜೀವನದಲ್ಲಿ ಬರುತ್ತಾರೆ– ಹೋಗುತ್ತಾರೆ ಆದರೆ ಪುಸ್ತಕಗಳು ಜೀವನದ ಸಂಗಾತಿಗಳು’ ಎಂದು ತಿಳಿಸಿದರು.
‘ವಿದ್ಯಾರ್ಥಿಗಳು ಆತ್ಮಚರಿತ್ರೆ, ಕಥೆ, ಕಾದಂಬರಿ ಇತರ ಸ್ಪರ್ಧಾತ್ಮಕ ಪತ್ರಿಕೆಗಳನ್ನು ಓದುವ ಅಭಿರುಚಿ ಬೆಳಸಿಕೊಳ್ಳಬೇಕು’ ಎಂದರು.
‘ಗ್ರಂಥಾಲಯದಲ್ಲಿ ಕಾಲ ಕಳೆಯುವ ಮೂಲಕ ವಿದ್ಯಾರ್ಥಿಗಳು ಶಾಲಾ- ಕಾಲೇಜಿನ ರಜೆಯ ಅವಧಿಯನ್ನು ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಹೇಳಿದರು.
ದಿನಲೂ ಗ್ರಂಥಾಲಯಕ್ಕೆ ಬಂದು ಪುಸ್ತಕ ಅಧ್ಯಯನ ಮಾಡುತ್ತಿರುವ ಗ್ರಾಮದ 4ನೇ ತರಗತಿಯ ವಿದ್ಯಾರ್ಥಿ ಚೈತ್ರಾ ಲೋಕೇಶ ಮತ್ತು 10ನೇ ತರಗತಿಯ ವಿದ್ಯಾರ್ಥಿ ಗಾಯತ್ರಿ ನಾಗಪ್ಪ ಅವರಿಗೆ ಪ್ರಶಸ್ತಿ ಪತ್ರ ಹಾಗೂ ನುಡಿಗಂಟು ಪುಸ್ತಕ ನೀಡಿ ಗೌರವಿಸಲಾಯಿತು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವೀಂದ್ರ ಕುಲಕರ್ಣಿ, ಸಿಆರ್ಪಿ ಮುರ್ತುಜಾ ಖಾದ್ರಿ, ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಶಕುಂತಲಾ, ಗ್ರಂಥಪಾಲಕ ಗುರುರಾಜ ಜೋಶಿ ಹಾಗೂ ಗ್ರಾಮ ಪಂಚಾಯಿತಿ ಕರವಸೂಲಗಾರ ನಾಗೇಶ ನಾಯಕ ಇದ್ದರು.