ಕುಕನೂರು: ಕಡಿಮೆ ಹೂಡಿಕೆ ಮತ್ತು ಹೆಚ್ಚು ಆದಾಯ ಪಡೆಯುವುದು ಕೃಷಿಯಲ್ಲಿ ಸಾಧ್ಯ ಎಂದು ಇಲ್ಲಿನ ಯುವಕ ವೀರೇಶ ಸೋಮನಗೌಡ್ರ ತೋರಿಸಿದ್ದಾರೆ.
ಕಡಿಮೆ ಕಾಲಾವಧಿ ಮತ್ತು ವೆಚ್ಚದಲ್ಲಿ ಹೆಚ್ಚಿನ ಇಳುವರಿ ಮಿಶ್ರ ಬೆಳೆ ಪದ್ಧತಿ ಅನುಸರಿಸುವ ಮೂಲಕ ಅವರು ಈ ಸಾಧನೆ ಮಾಡಿದ್ದಾರೆ.
ಸೋಮನಗೌಡ್ರ ಅವರು ವಿಮಾನ ನಿಲ್ದಾಣವೊಂದರಲ್ಲಿ ಹೋಟೆಲ್ ವ್ಯವಹಾರ ನಡೆಸುತ್ತಿದ್ದರು. ಅದೆಲ್ಲವನ್ನೂ ಬಿಟ್ಟು ಕೃಷಿ ಭೂಮಿಗೆ ಮರಳಿದ್ದಾರೆ. ಗಾವರಾಳ ರಸ್ತೆಯ ಹತ್ತಿರದ ತೋಟದಲ್ಲಿ ನಾಲ್ಕು ಎಕರೆ ಭೂಮಿಯನ್ನು ಮಿಶ್ರ ಬೆಳೆ ಬೆಳೆಯಲು ನಿರ್ಧರಿಸಿದರು. 'ಡಿಎಪಿ 1 ಕ್ವಿಂಟಲ್, ಪೋಟ್ಯಾಷ್ 50 ಕೆಜಿ, 1 ಕ್ವಿಂಟಲ್ ಬೇವಿನ ಹಿಂಡಿ, ಎಸ್ಎಪಿ 80 ಕೆಜಿ ಹಾಕಿ ಭೂಮಿ ಅಣಿ ಮಾಡಿದೆ.
ಹನಿ ನೀರಾವರಿ ಅಳವಡಿಸಿ ತೊಗರಿ, ಸೇವಂತಿಗೆ ಎರಡರ ಮಧ್ಯದಲ್ಲಿ ಮಾವು, ಚಿಕ್ಕು ಗಿಡ, ಬದುವಿನಲ್ಲಿ ತೆಂಗು ಹಾಗೂ ರೇಷ್ಮೆ ಬೆಳೆ ಮಾಡಿದ್ದೇನೆ. ನಾಲ್ಕು ಎಕರೆ ಪ್ರದೇಶದಲ್ಲಿ 4 ಮಿಶ್ರ ಬೆಳೆಯನ್ನು ಬೆಳೆದು ಕೇವಲ ಐದೂವರೆ ತಿಂಗಳಲ್ಲಿ 4 ಲಕ್ಷಕ್ಕೂ ಅಧಿಕ ಲಾಭ ಕೈಗೆ ಬಂದಿದೆ ಎಂದರು ಸೋಮನಗೌಡ್ರ.
'ಬೆಳೆಗಳಿಗೆ ಡ್ರಿಪ್ ಮೂಲಕ ನೀರು ಒದಗಿಸಲಾಗುತ್ತಿದೆ. ಸಸಿ ನೆಟ್ಟ 35ರಿಂದ 45 ದಿನಗಳವರೆಗೆ ಪ್ರತಿದಿನ ಒಂದೂವರೆ ತಾಸು, 45 ರಿಂದ 50ದಿನಗಳ ವರೆಗೆ 2ತಾಸು ನಂತರ 50 ರಿಂದ 55 ದಿನಗಳವರೆಗೆ 1 ತಾಸು ಹೀಗೆ ದಿನಕಳೆದಂತೆ ನೀರಿನ ಪ್ರಮಾಣ ಕಡಿಮೆ ಮಾಡುತ್ತಾ ಬಂದಿದ್ದೇವೆ. ಇದರಿಂದ ನೀರಿನ ಉಳಿತಾಯ ಮತ್ತು ಉತ್ತಮ ಇಳುವರಿ ಪಡೆಯಬಹುದು' ಎನ್ನುತ್ತಾರೆ ಅವರು.
ಸೇವಂತಿಗೆ ಸದ್ಯ ಮಾರುಕಟ್ಟೆಯಲ್ಲಿ 1ಕೆಜಿಗೆ ₹ 50 ಬೆಲೆ ಇದೆ. ಎಕರೆಗೆ 1 ವಾರದಲ್ಲಿ 2 ಕ್ವಿಂಟಲ್ ಇಳುವರಿಯಿಂದ ₹ 10 ಸಾವಿರ ಆದಾಯ ಹಾಗೂ ರೇಷ್ಮೆ ಬೆಳೆಯಲ್ಲಿ ಮೂರು ತಿಂಗಳಿಗೊಮ್ಮೆ ₹ 50 ಸಾವಿರ ಆದಾಯ, 2 ಎಕರೆ ಮಿಶ್ರ ಬೆಳೆಯಲ್ಲಿ ತೊಗರಿ ಬೆಳೆಯಲ್ಲಿ ₹ 1 ಲಕ್ಷ ಆದಾಯ ಪಡೆಯಬಹುದು ಎನ್ನುತ್ತಾರೆ ಅವರು.
ಸದ್ಯ ರೇಷ್ಮೆ ಹಾಗೂ ಸೇವಂತಿಗೆ ಬೆಂಗಳೂರು, ಹುಬ್ಬಳ್ಳಿ, ಮುಂಬಯಿ ಉತ್ತಮ ಮಾರುಕಟ್ಟೆಗಳು. ದಲ್ಲಾಳಿಗಳು ಇಲ್ಲಿಗೇ ಬಂದು ಒಯ್ಯುತ್ತಾರೆ ಎಂದರು ಸೋಮನಗೌಡ್ರ. ಮಾಹಿತಿಗೆ ಮೊ. 7406 4293 11.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.