ಗಂಗಾವತಿ: ಸರ್ಕಾರಿ ಸ್ವಾಮ್ಯದ ಕರ್ನಾಟಕ ರಾಜ್ಯ ಕೈಗಾರಿಕೆ ಸಂಸ್ಥೆ (ಕೆಎಸ್ಐಸಿ)ಯ ಕೈಮಗ್ಗದಲ್ಲಿ ಉತ್ಪಾದನೆಯಾಗುವ ರೇಷ್ಮೆ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಯನ್ನು ಕೊಪ್ಪಳ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ.ರವಿ ಬುಧವಾರ ಉದ್ಘಾಟಿಸಿದರು.
ನಗರದ ಸರೋಜಮ್ಮ ಕಲ್ಯಾಣ ಮಂಟಪದಲ್ಲಿ ಕೆಎಸ್ಐಸಿ ಸಂಸ್ಥೆಯಿಂದ ಹಮ್ಮಿಕೊಂಡ ರೇಷ್ಮೆ ಸೀರೆಗಳ ಪ್ರದರ್ಶನ ಮತ್ತು ಸಂಚಾರ ಮಾರಾಟ ಮಳಿಗೆಗೆ 50 ಸಾವಿರ ರೂಪಾಯಿ ಮೌಲ್ಯದ ಎರಡು ನೂತನ ವಿನ್ಯಾಸದ ಸೀರೆಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ರೇಷ್ಮೆ ಸೀರೆಗಳ ಉತ್ಪಾದನೆಯು ಸರ್ಕಾರದ ಅಂಗ ಸಂಸ್ಥೆಯಿಂದ ನಡೆಯುತ್ತಿದೆ. ಉತ್ಪಾದನೆಗೊಂಡ ಬಳಿಕ ಮಧ್ಯವರ್ತಿಯ ಹಾವಳಿ ಇಲ್ಲದೆಯೇ ನೇರವಾಗಿ ಗ್ರಾಹಕರಿಗೆ ತಲುಪುತ್ತದೆ. ಹೀಗಾಗಿ ಗ್ರಾಹಕರು ಬೆಲೆ, ಗುಣಮಟ್ಟದಿಂದ ವಂಚನೆಗೆ ಒಳಗಾಗುವ ಸಾಧ್ಯತೆ ಇಲ್ಲ ಎಂದರು.
ಸಂಸ್ಥೆಯ ಶತಮಾನದ ಇತಿಹಾಸ ಹೊಂದಿದ್ದು, ಮೈಸೂರು ರೇಷ್ಮೆ ಕಳೆದೊಂದು ಶತಮಾನದಿಂದ ದೇಶ, ವಿದೇಶಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ರಾಜ್ಯದಲ್ಲಿ ಉತ್ಪಾದನೆಯಾಗುವ ಉತ್ಕೃಷ್ಟ ಗುಣಮಟ್ಟದ ಸೀರೆ ಮತ್ತಿತರ ರೇಷ್ಮೆ ವಸ್ತ್ರಗಳು ವಿದೇಶಿ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಸೃಷ್ಟಿಸುವ ಮೂಲಕ ಕರ್ನಾಟಕಕ್ಕೆ ಅಂತರರಾಷ್ಟ್ರೀಯ ಖ್ಯಾತಿ ತಂದುಕೊಟ್ಟಿದೆ ಎಂದು ಬಣ್ಣಿಸಿದರು.
ಕೆಎಸ್ಐಸಿಯ ಮಾರುಕಟ್ಟೆ ಅಧಿಕಾರಿ ಫಿಲೋಮಿನಾ ರಾಜ್ ಮಾತನಾಡಿ, ಶತಮಾನೋತ್ಸವಕ್ಕಾಗಿ ಪ್ರತಿ ಸೀರೆಯ ಮೇಲೆ ಶೇ 10 ರಿಂದ 25ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಜೊತೆಗೆ ರೂ 500 ನಗದು ರಿಯಾಯಿತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕುಸುಮ ಡಿ.ಕೆ.ರವಿ, ಭೈರಮ್ಮ, ತಹಶೀಲ್ದಾರ್ ಎಂ.ಗಂಗಣ್ಣ, ಗಂಗಾವತಿ ಶಿರಸ್ತೇದಾರ ಮೋಹನರಾವ್, ಕೆಎಸ್ಐಸಿಯ ಸಿಬ್ಬಂದಿಗಳಾದ ಕುಮಾರಸ್ವಾಮಿ, ರವಿ, ವೈ.ಪಿ. ರಾಜು, ರುಕ್ಮಾಂಗದ, ರಾಜ್, ಮೇಘ, ದರ್ಶಿನಿ ಇದ್ದರು.