ಬೆಂಗಳೂರು: ಸದಾಶಿವನಗರ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಸೈಕಲ್ ಕದಿಯುತ್ತಿದ್ದ ಆರೋಪದಡಿ ಮಹಮ್ಮದ್ ಇಸಾಕ್ ಅಹ್ಮದ್ (39) ಹಾಗೂ ಆತನಿಂದ ಸೈಕಲ್ ಖರೀದಿ ಮಾಡುತ್ತಿದ್ದ ಸೈಯದ್ ಇಕ್ಬಾಲ್ (52) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ಮಾಗಡಿ ರಸ್ತೆಯ ಗೋಪಾಲಪುರ ನಿವಾಸಿ ಅಹ್ಮದ್, ಸದಾಶಿವನಗರದ ಸ್ಯಾಂಕಿ ಕೆರೆ ಬಳಿಯ ಫುಟ್ಪಾತ್ನಲ್ಲಿ ಫೆ. 27ರಂದು ನಿಲ್ಲಿಸಿದ್ದ ಎಂ.ಮಣಿವಣ್ಣನ್ ಎಂಬುವರ ₹20 ಸಾವಿರ ಮೌಲ್ಯದ ಸೈಕಲ್ ಕದ್ದಿದ್ದ. ಆ ಬಗ್ಗೆ ಮಣಿವಣ್ಣನ್ ದೂರು ನೀಡಿದ್ದರು.
‘ಸ್ಯಾಂಕಿ ಕೆರೆ ಸೇರಿದಂತೆ ಸುತ್ತಮುತ್ತ ಸಾರ್ವಜನಿಕ ಸ್ಥಳಗಳಲ್ಲಿ ಗಸ್ತು ಹೆಚ್ಚಿಸಿದ್ದೆವು. ಆರೋಪಿಯು ಪುನಃಕಳ್ಳತನಕ್ಕೆಂದು ಬಂದಾಗಲೇ ನಮಗೆ ಸಿಕ್ಕಿಬಿದ್ದ. ಕದ್ದ ಸೈಕಲ್ಗಳನ್ನು ಕಾಟನ್ಪೇಟೆಯಲ್ಲಿ ಗುಜರಿ ಅಂಗಡಿ ಇಟ್ಟುಕೊಂಡಿದ್ದ ಇಕ್ಬಾಲ್ಗೆ ಮಾರಿರುವುದಾಗಿ ತಿಳಿಸಿದ್ದ. ನಂತರ ಆತನನ್ನೂ ಬಂಧಿಸಿದೆವು’ ಎಂದು ಪೊಲೀಸರು ತಿಳಿಸಿದರು.
‘ಕದ್ದ ಸೈಕಲ್ಗಳನ್ನು ಆರೋಪಿಯು ₹3 ಸಾವಿರದಿಂದ ₹5 ಸಾವಿರಕ್ಕೆ ಮಾರಾಟ ಮಾಡುತ್ತಿದ್ದ ಎಂಬುದನ್ನು ಒಪ್ಪಿಕೊಂಡಿದ್ದಾನೆ. ಆತನಿಂದ 10 ಸೈಕಲ್ಗಳನ್ನು ಜಪ್ತಿ ಮಾಡಿದ್ದೇವೆ’ ಎಂದರು.