ಮಂಡ್ಯ: ಪೆಟ್ರೋಲ್ ಬಂಕ್ ಸ್ಥಾಪನೆಗೆ ನಿರಾಕ್ಷೇಪಣಾ ಪತ್ರ (ಎನ್ಒಸಿ) ನೀಡಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಜಿಲ್ಲಾ ಪರಿಸರ ಅಧಿಕಾರಿ ಹೇಮಲತಾ, ವ್ಯಕ್ತಿಯೊಬ್ಬರಿಂದ ಲಂಚ ಪಡೆಯುತ್ತಿದ್ದಾಗ ಭ್ರಷ್ಟಾಚಾರ ನಿಗ್ರದ ದಳ (ಎಸಿಬಿ) ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ ಬಂಧಿಸಿದ್ದಾರೆ.
ಮಳವಳ್ಳಿ ತಾಲ್ಲೂಕು, ಹಲಗೂರು ಪಟ್ಟಣದ ಶಶಿಕಾಂತ್ ಪೆಟ್ರೋಲ್ ಬಂಕ್ ಸ್ಥಾಪನೆಗೆ ಎನ್ಒಸಿ ಕೋರಿದ್ದರು. ಪರಿಸರ ಅಧಿಕಾರಿ ಹೇಮಲತಾ ₹ 30 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು, ಮುಂಗಡವಾಗಿ ₹ 15 ಸಾವಿರ ಕೊಡುವಂತೆ ಸೂಚಿಸಿದ್ದರು. ಈ ಕುರಿತು ಶಶಿಕಾಂತ್ ಎಸಿಬಿಗೆ ದೂರು ನೀಡಿದ್ದರು.
ಶುಕ್ರವಾರ ನಗರದ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಯಲ್ಲಿ ₹ 15 ಸಾವಿರ ಲಂಚ ಪಡೆಯುವ ವೇಳೆ ಎಸಿಬಿ ಡಿವೈಎಸ್ಪಿ ಧರ್ಮೇಂದ್ರ ನೇತೃತ್ವದ ತಂಡ ದಾಳಿ ನಡೆಸಿತು. ಹೇಮಲತಾ ಅವರನ್ನು ಬಂಧಿಸಿದ ಎಸಿಬಿ ಅಧಿಕಾರಿಗಳು ನಗದು ಹಾಗೂ ಇತರ ದಾಖಲಾತಿಗಳನ್ನು ವಶಕ್ಕೆ ಪಡೆದರು.
ದಾಳಿಯಲ್ಲಿ ಎಸಿಬಿ ಇನ್ಸ್ಪೆಕ್ಟರ್ಗಳಾದ ಪುರುಷೋತ್ತಮ್, ವಿನೋದ್ರಾಜ್ ಹಾಗೂ ಸಿಬ್ಬಂದಿ ವೆಂಕಟೇಶ್, ಮಹದೇವು, ಕುಮಾರ್, ಪಾಪಣ್ಣ, ಮಹೇಶ್ ಭಾಗಿಯಾಗಿದ್ದರು.