ಮಂಡ್ಯ: ಮೈಸೂರು ದಸರಾ ವೈಮಾನಿಕ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಭಾರತೀಯ ವಾಯು ಪಡೆಗೆ ಸೇರಿದ ಹೆಲಿಕಾಪ್ಟರ್ ತಾಂತ್ರಿಕ ದೋಷದ ಕಾರಣದಿಂದ ಶ್ರೀರಂಗಪಟ್ಟಣ ತಾಲ್ಲೂಕು ಮಹದೇವಪುರ ಬೋರೆಯ ಬಳಿ ಬುಧವಾರ ತುರ್ತು ಭೂಸ್ಪರ್ಶ ಮಾಡಿತು.
ಬೆಂಗಳೂರಿನ ಯಲಹಂಕ ವಾಯುನೆಲೆಯಿಂದ ಹೆಲಿಕಾಪ್ಟರ್ ಎಂಐ–17 ಹೊರಟಿತ್ತು. ಶ್ರೀರಂಗಪಟ್ಟಣ ಬಳಿ ಬರುತ್ತಿದ್ದಂತೆ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಹದೇವಪುರ ಸಮೀಪದ ಬೋರೆಯ ಮೈದಾನದಲ್ಲಿ ಭೂ ಸ್ಪರ್ಶ ಮಾಡಿತು. ಹೆಲಿಕಾಪ್ಟರ್ನಲ್ಲಿದ್ದ ಸಿಬ್ಬಂದಿಗೆ ಯಾವುದೇ ಅಪಾಯಗಳಾಗಿಲ್ಲ.
ಬೆಂಗಳೂರಿನಿಂದ ಬಂದ ಭಾರತೀಯ ವಾಯು ಪಡೆ ತಂತ್ರಜ್ಞರು ಹೆಲಿಕಾಪ್ಟರ್ ಪರಿಶೀಲನೆ ನಡೆಸಿದರು. ಸ್ಥಳೀಯ ಪೊಲೀಸರು ಭದ್ರತೆ ಒದಗಿಸಿದರು.