ಶ್ರೀರಂಗಪಟ್ಟಣ: ನಟ ದಿವಂಗತ ಅಂಬರೀಶ್ ಅವರ 71ನೇ ಜನ್ಮದಿನ ಆಚರಣೆ ಪ್ರಯುಕ್ತ ಅಂಬರೀಷ್ ಅಭಿಮಾನಿಗಳು ನಟನ ಕಟೌಟ್ಗೆ ಕ್ಷೀರಾಭಿಷೇಕ ಮಾಡಿದರು.
ಪಟ್ಟಣದ ಕುವೆಂಪು ವೃತ್ತದಲ್ಲಿ ಸೋಮವಾರ ಅಂಬರೀಷ್ ಕಟೌಟ್ ನಿಲ್ಲಿಸಿ ಸರದಿಯಂತೆ ಪೂಜೆ , ಪುಷ್ಪಾರ್ಚನೆ ಮಾಡಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ 50ಕ್ಕೂ ಹೆಚ್ಚು ರೋಗಿಗಳು ಮತ್ತು ಸಿಬ್ಬಂದಿಗೆ ಹಣ್ಣು ಮತ್ತು ಬ್ರೆಡ್ ವಿತರಿಸಿದರು.
ಅಂಬರೀಷ್ ಅಭಿಮಾನಿಗಳ ಸಂಘದ ಗೌರವಾಧ್ಯಕ್ಷ ಹಾಗೂ ಅವರ ಆಪ್ತ ಎಸ್.ಎಲ್. ಲಿಂಗರಾಜು ಮಾತನಾಡಿ, ‘ಅಂಬರೀಷ್ ಕನ್ನಡ ಚಿತ್ರರಂಗದ ಅಜಾತಶತ್ರುವಾಗಿದ್ದರು. ಚಿತ್ರರಂಗದಲ್ಲಿ ಹಿರಿಯಣ್ಣನಂತೆ ಇದ್ದು ಯುವ ಕಲಾವಿದರನ್ನು ಬೆಳೆಸಿದರು. ಕೇಂದ್ರ ಮತ್ತು ರಾಜ್ಯದಲ್ಲಿ ಮಂತ್ರಿಯಾಗಿ ಹತ್ತಾರು ಅಭಿವೃದ್ಧಿ ಕಾರ್ಯಗಳನ್ನು ಕೂಡ ಮಾಡಿದ್ದಾರೆ. ನೊಂದವರಿಗೆ ಸಹಾಯ ಹಸ್ತ ಚಾಚುವ ಮೂಲಕ ಕಲಿಯುಗದ ಕರ್ಣ ಎಂದು ಕರೆಸಿಕೊಂಡದ್ದರು’ ಎಂದು ಭಾವುಕರಾದರು.
ಅಭಿಮಾನಿ ನಾಗರಾಜು, ನಗುವನಹಳ್ಳಿ ಮಹದೇವಸ್ವಾಮಿ, ವಿ.ಇ. ನಾಗರಾಜು, ಮುಂಡುಗದೊರೆ ಮೋಹನ್, ಚಂದಗಿರಿಕೊಪ್ಪಲು ಗೋಪಿ, ಕೆ.ಶೆಟ್ಟಹಳ್ಳಿ ಬೋರಣ್ಣ, ಪುರಸಭೆ ಮಾಜಿ ಸದಸ್ಯ ಸುನಿಲ್, ಕೆಂಚ ರಮೇಶ್, ನಾಗರಾಜಯ್ಯ, ಎಸ್. ರಘು, ಬಿ.ಸಿ. ಸಂತೋಷ್ಕುಮಾರ್ ಇದ್ದರು.