ಹೆಮ್ಮನಹಳ್ಳಿ ಗ್ರಾಮದ ಮಾಸ್ತಮ್ಮ ದೇವಸ್ಥಾನದ ಅಭಿವೃದ್ಧಿ ಸೇವಾ ಸಮಿತಿಯ ಕಾರ್ಯದರ್ಶಿಯೂ ಆಗಿರುವ ಅವರು, ದೇವಸ್ಥಾನಕ್ಕೆ ಸೇರಿದ ಸುಮಾರು ಒಂದೂ ಕಾಲು ಎಕರೆ ಪ್ರದೇಶದಲ್ಲಿ 9 ವರ್ಷಗಳ ಹಿಂದೆ ನೆಟ್ಟಿದ್ದ ಸಸಿಗಳು ಈಗ ಮರಗಳಾಗಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ತಂಪು ನೀಡುತ್ತಿವೆ.
ಸಾರಿಗೆ ಸಂಸ್ಥೆಯಲ್ಲಿ ಬಸ್ ಕಂಡಕ್ಟರ್ ಆಗಿದ್ದ ಅವರು, 2014ರಲ್ಲಿ ನಿವೃತ್ತರಾದ ಬಳಿಕ ತಮ್ಮ ಗ್ರಾಮದ ಮಾಸ್ತಮ್ಮ ದೇವಸ್ಥಾನಕ್ಕೆ ವಾರದಲ್ಲಿ ಎರಡು ದಿನ (ಗುರುವಾರ ಹಾಗೂ ಭಾನುವಾರ) ಪೂಜೆಗೆ ಹಲವು ಗ್ರಾಮಗಳಿಂದ ಬರುವ ಭಕ್ತರು ಸೂಕ್ತ ನೆರಳಿಲ್ಲದೆ ಪರಿತಪಿಸುವುದನ್ನು ಕಂಡು ದೇವಸ್ಥಾನ ಸುತ್ತ ಹೊಂಗೆ, ಹಿಪ್ಪು, ಬೇವು, ಹುಣಸೆ, ಸಂಪಿಗೆ ಸೇರಿದಂತೆ ಹಲವು ಪ್ರಭೇದದ ಗಿಡಗಳನ್ನು ನೆಟ್ಟು ಅವುಗಳಿಗೆ ನೀರು ಹಾಕಿ ಆರೈಕೆ ಮಾಡಿದ್ದಾರೆ.
ನಂತರ ದೇವಸ್ಥಾನದ ಅಭಿವೃದ್ಧಿ ಸೇವಾ ಸಮಿತಿಯನ್ನು ರಚನೆ ಮಾಡಿ ಆ ಸಮಿತಿಯ ಮೂಲಕ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಅನುಕೂಲವಾಗಲು ಸ್ನಾನದ ಮನೆ, ತಂಗು ಮನೆ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕ, ಮರಗಳ ಬಳಿ ಕುಳಿತುಕೊಳ್ಳಲು ಸಿಮೆಂಟ್ ಹಾಗೂ ಕಲ್ಲು ಚಪ್ಪಡಿಗಳನ್ನು ಹಾಕಿಸಿ ಅನುಕೂಲ ಕಲ್ಪಿಸಿದ್ದಾರೆ.
ಜೈಶಂಕರ್ ಅವರ ಈ ಪರಿಸರ ಹಾಗೂ ಸಾಮಾಜಿಕ ಕಾಳಜಿಗೆ ಗ್ರಾಮದ ಜನರು ಹಾಗೂ ಮಾಸ್ತಮ್ಮ ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.