ಮಂಡ್ಯ: ಕೋವಿಡ್–19ನಿಂದ ಗುಣಮುಖರಾದ ಕೆ.ಆರ್.ಪೇಟೆ ಪಟ್ಟಣ ಠಾಣೆಯ ಹೆಡ್ಕಾನ್ಸ್ಟೆಬಲ್ ನಾಗರಾಜು ಅವರಿಗೆ ದಕ್ಷಿಣ ವಲಯದ ಪೊಲೀಸ್ ಮಹಾ ನಿರ್ದೇಶಕ ವಿಫುಲ್ ಕುಮಾರ್ ಶುಕ್ರವಾರ ಬೀಳ್ಕೊಡುಗೆ ನೀಡಿದರು.
ಕ್ವಾರಂಟೈನ್ ಕೇಂದ್ರಗಳಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಅವರಿಗೆ ಮೇ 21ರಂದು ಸೋಂಕು ದೃಢಪಟ್ಟಿತ್ತು. 14 ದಿನ ಚಿಕಿತ್ಸೆ ಪಡೆದ ಅವರಿಗೆ ಅಂತಿಮವಾಗಿ ಮೂರು ಬಾರಿ ಕೋವಿಡ್ ಪರೀಕ್ಷೆ ನಡೆಸಲಾಯಿತು. ಎಲ್ಲಾ ವರದಿಗಳು ನೆಗೆಟಿವ್ ಇದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.
ಫ್ರಂಟ್ಲೈನ್ ಕೊರೊನಾ ವಾರಿಯರ್ ಆಗಿದ್ದ ಅವರು ಶೀಘ್ರ ಗುಣಮುಖರಾಗಿದ್ದು ಪೊಲೀಸ್ ಬ್ಯಾಂಡ್ನೊಂದಿಗೆ ಗೌರವ ಸಲ್ಲಿಸಲಾಯಿತು.
‘ಆತ್ಮವಿಶ್ವಾಸ ಹಾಗೂ ಧೈರ್ಯದಿಂದ ಕೊರೊನಾ ಸೋಂಕಿನ ವಿರುದ್ಧ ಹೋರಾಟ ಮಾಡಬೇಕಿದೆ. ಇಂತಹ ಹೋರಾಟದಲ್ಲಿ ನಮ್ಮ ಸಿಬ್ಬಂದಿ ಗೆಲುವು ಕಂಡಿದ್ದು ಎಲ್ಲರಲ್ಲೂ ವಿಶ್ವಾಸ ಮೂಡಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಅಭಿನಂದಿಸಲು ಬಂದಿದ್ದೇನೆ’ ಎಂದು ವಿಫುಲ್ಕುಮಾರ್ ಹೇಳಿದರು.
ಸಿಡಿಪಿಒ ಗುಣಮುಖ: ಮಳವಳ್ಳಿ ನಿಷೇಧಿತ ವಲಯ ಈದ್ಗಾ ಬಡಾವಣೆಯಲ್ಲಿ ಕಾರ್ಯನಿರ್ವಾಹಕ ದಂಡಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಕುಮಾರ್ ಕೂಡ ಕೋವಿಡ್ ಗೆದ್ದಿದ್ದಾರೆ. ಅವರೊಂದಿಗೆ ಗುಣಮುಖರಾದ ಇತರ 12 ಮಂದಿಯನ್ನೂ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.
ಇಲ್ಲಿಯವರೆಗೆ ಜಿಲ್ಲೆಯಲ್ಲೆ 317 ಮಂದಿಗೆ ಕೋವಿಡ್ ಪತ್ತೆಯಾಗಿದ್ದು 147 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.