ಮಳವಳ್ಳಿ: ತಾಲ್ಲೂಕಿನ ದೇವಿಪುರ ಗ್ರಾಮದ ಗ್ರಾಮದೇವತೆ ಪಟ್ಟಲದಮ್ಮನ ಹಬ್ಬವನ್ನು ಮೂರು ದಿನ ಸಂಭ್ರಮದಿಂದ ಆಚರಿಸಲಾಯಿತು.
ಶುಕ್ರವಾರ ಆರಂಭವಾದ ಗ್ರಾಮದ ಶಕ್ತಿ ದೇವತೆ ಪಟ್ಟಲದಮ್ಮನ ಹಬ್ಬದ ಕೊಂಡೊತ್ಸವ ಹಿನ್ನೆಲೆಯಲ್ಲಿ ಅಲಂಕಾರಗೊಂಡಿದ್ದ ಎತ್ತಿನಗಾಡಿನ ಮೆರವಣಿಗೆಗೆ ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಅವರು ಚಾಲನೆ ನೀಡಿದರು.
ಹಬ್ಬದ ಆಚರಣೆ ನಮ್ಮ ನಾಡಿನ ಸಂಸ್ಕೃತಿಯ ಪ್ರತಿಬಿಂಬ. ಅದನ್ನು ಸಂಪ್ರದಾಯ ಬದ್ಧವಾಗಿ ಆಚರಿಸುವ ಮೂಲಕ ಸಾಮರಸ್ಯದಿಂದ ಬಾಳಬೇಕು ಎಂದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಸೌದೆ ತುಂಬಿದ್ದ ಎತ್ತಿನ ಗಾಡಿನ ಮೆರವಣಿಗೆ ಹೊರವಲಯದ ಪಟ್ಟಲದಮ್ಮನ ದೇವಸ್ಥಾನದವರೆಗೆ ನಡೆಯಿತು.
ಮಧ್ಯರಾತ್ರಿ ಪಟ್ಟಲದಮ್ಮ ದೇವರಿಗೆ ಚೌಡಕಟ್ಟೆಯಿಂದ ಮೀಸಲು ನೀರು ತಂದು ಪೂಜೆ ಸಲ್ಲಿಸಲಾಯಿತು. ವಿವಿಧ ಹೂಗಳಿಂದ ಅಲಂಕಾರಗೊಂಡಿದ್ದ ಪಟ್ಟಲದಮ್ಮ ಹಾಗೂ ಕರಗವನ್ನು ಗ್ರಾಮದ ಎಲ್ಲ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
ಮಹಿಳೆಯರು ತಂಬಿಟ್ಟಿನ ಆರತಿ ಹೊತ್ತು ದೇವಸ್ಥಾನದ ಆವರಣದ ತಲುಪಿದರು.
ಶನಿವಾರ ಬೆಳಗ್ಗಿನ ಜಾವ ಅರ್ಚಕ ನಿಂಗೇಗೌಡ ಕೊಂಡ ಹಾಯ್ದರು. ಕೊಂಡೊತ್ಸವ ನೋಡಲು ಅಕ್ಕಪಕ್ಕದ ಸಾವಿರಾರು ಮಂದಿ ಬಂದಿದ್ದರು. ಈ ಬಾರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೀಪಾಂಲಕಾರ ಗಮನ ಸೆಳೆಯಿತು.
ಹಬ್ಬದ ಅಂಗವಾಗಿ ಚೌಡೇಶ್ವರಿ ಕೃಪಾ ಪೋಷಿತ ನಾಟಕ ಮಂಡಳಿ ಆಯೋಜಿಸಿದ್ದ ಹಾಸ್ಯಭರಿತ ಮನತುಂಬಿದವಳು ಮನೆ ತುಂಬಲಿಲ್ಲ ಸಾಮಾಜಿಕ ನಾಟಕ ಮನ ಸೆಳೆಯಿತು.