ಮಳವಳ್ಳಿ: ‘ಕಂದಾಯ ಇಲಾಖೆ ಅಧಿಕಾರಿಗಳು ಲಂಚ ಪಡೆಯಲು ಮತ್ತು ಭ್ರಷ್ಟಾಚಾರಕ್ಕೆ ಶಾಸಕರೇ ಕಾರಣ ಎನ್ನುತ್ತಾರೆ. ನಾನು ಒಂದೇ ಒಂದು ರೂಪಾಯಿ ಹಣ ಪಡೆದಿಲ್ಲ. ಈ ಬಗ್ಗೆ ಮಲೆ ಮಹದೇಶ್ವರಸ್ವಾಮಿ ಮೇಲೆ ಆಣೆ ಪ್ರಮಾಣ ಸಿದ್ಧ’ ಎಂದು ಶಾಸಕ ಡಾ.ಕೆ.ಅನ್ನದಾನಿ ತಿಳಿಸಿದರು.
ತಾಲ್ಲೂಕಿನ ಕಿರುಗಾವಲು ಗ್ರಾಮದಲ್ಲಿ ಶನಿವಾರ ಕಂದಾಯ ಇಲಾಖೆ ಆಯೋಜಿಸಿದ್ದ ‘ಕಂದಾಯ ದಾಖಲೆ ಮನೆ ಬಾಗಿಲಿಗೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಕಂದಾಯ ಇಲಾಖೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ಇತ್ತು. ಅದನ್ನು ತಡೆಗಟ್ಟಲು ಈ ಕಾರ್ಯಕ್ರಮ ಸಹಕಾರಿ. ಕೆಳಹಂತದ ಕೆಲ ಅಧಿಕಾರಿಗಳು ಜನರಿಂದ ಲಂಚ ಪಡೆಯುತ್ತಾರೆ. ಅಂತಹವರಿಂದ ನಮಗೆ ಕೆಟ್ಟ ಹೆಸರು ಬರುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಆರ್ಟಿಸಿ, ಹಿಸ್ಸಾ ನಕ್ಷೆ, ಆದಾಯ ಹಾಗೂ ಜಾತಿ ಪ್ರಮಾಣಪತ್ರ ಸೇರಿದಂತೆ ಕೆಲ ದಾಖಲಾತಿಗಳನ್ನು ಮನೆ ಮನೆಗೆ ತಲುಪಿಸುವ ಮೂಲಕ ರಾಜ್ಯ ಸರ್ಕಾರ ಜನಪರ ಕಾರ್ಯದಲ್ಲಿ ತೊಡಗಿದೆ’ ಎಂದು ಶಾಸಕ ಡಾ.ಕೆ.ಅನ್ನದಾನಿ ತಿಳಿಸಿದರು.
ಉಪವಿಭಾಗಾಧಿಕಾರಿ ಐಶ್ವರ್ಯಾ ಮಾತನಾಡಿ, ‘ಜನರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಈ ಯೋಜನೆ ಜಾರಿಗೊಳಿಸಲಾಗಿದೆ’ ಎಂದರು.
ತಹಶೀಲ್ದಾರ್ ಎಂ.ವಿಜಯಣ್ಣ, ಕೆಎಂಎಫ್ ನಿರ್ದೇಶಕ ವಿ.ಎಂ.ವಿಶ್ವನಾಥ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಂಜುಳಾ, ಜಿ.ಪಂ ಮಾಜಿ ಜಕ್ರೀಯಾ ಖಾನ್, ತಾ.ಪಂ ಮಾಜಿ ಸದಸ್ಯ ಸೋಮಶೇಖರ್, ಮುಖಂಡರಾದ ಪ್ರಕಾಶ್, ವೇಣು ಇದ್ದರು.