ಮಂಡ್ಯ: ಸಮಾಜದಲ್ಲಿನ ಅಂಧರಿಗೆ ಲೂಯಿ ಬ್ರೈಲ್ ಅವರು ಕಣ್ಣು ಇದ್ದಂತೆ ಎಂದು ತುಮಕೂರಿನ ಕ್ಯಾತಸಂದ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಂಧ ಶಿಕ್ಷಕ ಸುರೇಶ್ ಹೇಳಿದರು. ನಗರದ ಕಲಾಮಂದಿರದಲ್ಲಿ ಅಖಿಲ ಕರ್ನಾಟಕ ಗ್ರಾಹಕರ ಜಾಗೃತಿ ವೇದಿಕೆಯ ತಾಲ್ಲೂಕು ಘಟಕದ ವತಿಯಿಂದ ಬುಧವಾರ ನಡೆದ ಲೂಯಿ ಬ್ರೈಲ್ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಲೂಯಿ ಬ್ರೈಲ್ ಅವರು ಫ್ರಾನ್ಸ್ ದೇಶದವರೇ ಆದರೂ, ಇತರ ದೇಶಗಳಿಗೂ ಅವರ ಅಕ್ಷರ ಲಿಪಿ ಸಾಧನೆಯು ಮಾದರಿಯಾಗಿದೆ. ಅದು ಬ್ರೈಲ್ ಲಿಪಿ ಎಂದೇ ವಿಶ್ವದಲ್ಲಿ ಪ್ರಚಲಿತದಲ್ಲಿದೆ. ಅಂಧರು ಅಕ್ಷರಾಭ್ಯಾಸ ಮಾಡಲು ಅವರ ಆವಿಷ್ಕಾರ ಕಾರಣವಾಗಿದೆ ಎಂದು ಹೇಳಿದರು. ಚಿಕ್ಕವಯಸ್ಸಿನಲ್ಲಿ ಕಣ್ಣಿಗೆ ಪೆಟ್ಟು ಬಿದ್ದು ಲೂಯಿ ಅವರು ಅಂಧರಾದರು. ಆದರೆ, ಅವರು ಹಿಂಜರಿಯದೇ ವಿಶ್ವವೇ ತಮ್ಮತ್ತ ನೋಡುವ ಸಾಧನೆ ಮಾಡಿದರು. ಅವರಂತೆ ಸಾಧನೆ ಮಾಡುವ ಮನೋಭಾವ ಇಂದಿನ ಯುವ ಪೀಳಿಗೆಗೆ ಅಗತ್ಯ ಎಂದು ಹೇಳಿದರು.
ರೈತ ಸಂಘ(ಮೂಲ ಸಂಘಟನೆ)ಯ ಉಪಾಧ್ಯಕ್ಷ ಚಂದ್ರಶೇಖರ್ ಇಂಡುವಾಳು ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಸ್ತು ಕಲಿಸುವ ಅಗತ್ಯವಿದೆ. ಅಂಗವಿಕಲರನ್ನು ಗೌರವದಿಂದ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು. ಅಂಗವಿಕಲರು ಮಾಡಿರುವ ಸಾಧನೆ ಇಂದಿನ ಯುವ ಜನಾಂಗಕ್ಕೆ ಸ್ಫೂರ್ತಿದಾಯಕ ಎಂದು ಹೇಳಿದರು. ಅಖಿಲ ಕರ್ನಾಟಕ ಗ್ರಾಹಕರ ಜಾಗೃತಿ ವೇದಿಕೆಯ ರಾಜ್ಯ ಘಟಕ ಉಪಾಧ್ಯಕ್ಷ ಕೆ.ಎಸ್.ಸುಧೀರ್ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಎಚ್.ಆರ್.ಅರವಿಂದ್, ಕರ್ನಾಟಕ ಅಂಧರ ಸಂಘದ ಕಾರ್ಯದರ್ಶಿ ಕೆ. ಮಹೇಶ್, ಪ್ರೇರಣಾ ಅಂಧರ ಟ್ರಸ್ಟ್ ಕಾರ್ಯದರ್ಶಿ ರವಿಕುಮಾರ್, ಕಚ್ಚಿಗೆರೆ ಯೋಗೇಶ್, ವೇದಿಕೆಯ ರಾಜ್ಯ ಘಟಕ ಅಧ್ಯಕ್ಷ ಎಚ್.ಡಿ.ದೇವರಾಜು, ಸಂಘಟನಾ ಕಾರ್ಯದರ್ಶಿ ಸತೀಶ್ ಹುಳಿಯಾರ್ ಇದ್ದರು.