ಶ್ರೀರಂಗಪಟ್ಟಣ: ತಾಲ್ಲೂಕು ಕೇಂದ್ರಕ್ಕೆ ಧಾನ್ಯ ಸರಬರಾಜು ಮಾಡಲು ರೈತರು ಬವಣೆಪಡುತ್ತಿದ್ದು, ವ್ಯವಸಾಯ ಸೇವಾ ಸಹಕಾರ ಸಂಘಗಳಲ್ಲಿ ಧಾನ್ಯ ಖರೀದಿ ಕೇಂದ್ರ ತೆರೆಯಬೇಕು ಎಂದು ಒತ್ತಾಯಿಸಿ ರೈತರು ಮಂಗಳವಾರ ಶ್ರೀರಂಗಪಣದಲ್ಲಿ ತಹಶೀಲ್ದಾರ್ ಬಿ.ಸಿ. ಶಿವಾನಂದಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.
ರೈತ ಮುಖಂಡ ಕೆ.ಎಸ್. ನಂಜುಂಡೇಗೌಡ ಅವರ ನೇತೃತ್ವದಲ್ಲಿ ತಾಲ್ಲೂಕು ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
20, 25 ಕಿ.ಮೀ. ದೂರದ ಗ್ರಾಮಗಳ ರೈತರು ತಾಲ್ಲೂಕು ಕೇಂದ್ರಕ್ಕೆ ಧಾನ್ಯ ತರಲು ಕಷ್ಟವಾಗುತ್ತಿದೆ. ಸಕಾಲಕ್ಕೆ ವಾಹನಗಳು ಸಿಗುತ್ತಿಲ್ಲ. 50 ಕೆ.ಜಿ. ಸಂಗ್ರಹ ಸಾಮರ್ಥ್ಯದ ಚೀಲಗಳಲ್ಲೇ ಧಾನ್ಯ ತರಬೇಕು ಎಂಬ ನಿಯಮ ಇದ್ದು, ಆ ಪ್ರಮಾಣದ ಚೀಲಗಳು ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ. ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ರೈತರು ಕಡ್ಡಾಯವಾಗಿ ಖಾತೆ ಹೊಂದಿರಬೇಕು ಎಂಬ ನಿಯಮ ಕೂಡ ರೈತರಿಗೆ ತೊಂದರೆಯಾಗಿದೆ ಎಂದು ರೈತರು ಸಮಸ್ಯೆ ತೋಡಿಕೊಂಡರು.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಬಿ.ಸಿ. ಶಿವಾನಂದ ಮೂರ್ತಿ, ಡಿಸಿ ಜತೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದರು.
ಪಿ. ಕೆಂಪೇಗೌಡ, ಬಿ.ಸಿ. ಕೃಷ್ಣೇಗೌಡ, ಡಿ.ಎಸ್. ಚಂದ್ರಶೇಖರ್, ಪುರುಷೋತ್ತಮ, ಡಿ.ಎಂ. ಕೃಷ್ಣೇಗೌಡ, ಕೊಡಿಯಾಲ ಜವರೇಗೌಡ, ಆರ್. ರಮೇಶ್, ತಮ್ಮೇಗೌಡ ಇದ್ದರು.
ಪ್ರತಿಭಟನೆ ಐದನೇ ದಿನಕ್ಕೆ
ಮದ್ದೂರು: ಬೆಂಗಳೂರು-–ಮೈಸೂರು ಜೋಡಿ ರೈಲು ಕಾಮಗಾರಿಗೆ ಜಮೀನು ನೀಡಿರುವ ರೈತರಿಗೆ ರೈಲ್ವೆ ಇಲಾಖೆಯ ಹಿಂದೆ ನಿಗದಿಗೊಳಿಸಿದ್ದ ದರವನ್ನು ನೀಡುವಂತೆ ಒತ್ತಾಯಿಸಿ ನಡೆಸುತ್ತಿರುವ ರೈತರ ಪ್ರತಿಭಟನೆ ಬುಧವಾರ ಐದನೇ ದಿನಕ್ಕೆ ಕಾಲಿಟ್ಟಿತು.
ರೈತ ಸಂಘದ ಜಿಲ್ಲಾಧ್ಯಕ್ಷ ಕೋಣಸಾಲೆ ನರಸರಾಜು, ವಿಭಾಗೀಯ ಕಾರ್ಯದರ್ಶಿ ರಾಮಕೃಷ್ಣಯ್ಯ, ಮುಖಂಡರಾದ ಸೀತಾರಾಮು, ಗೊಲ್ಲರದೊಡ್ಡಿ ಅಶೋಕ್, ಶಿವನಂಜಯ್ಯ, ರಾಜು, ಸುಜಾತ, ಸಾವಿತ್ರಮ್ಮ, ದೇಶಹಳ್ಳಿ ಪಿ. ರಾಮಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.