ಶ್ರೀರಂಗಪಟ್ಟಣ: ತಾಲ್ಲೂಕಿನ ಮಹದೇವಪುರ ಬಳಿ ಬೀಡುಬಿಟ್ಟಿದ್ದ ಶಿರಾ ತಾಲ್ಲೂಕು ತರೂರು ಗ್ರಾಮದ ಕುರಿಗಾಹಿಗಳ 20 ಕುರಿಗಳು ಭಾನುವಾರ ಮುಂಜಾನೆ ಮೃತಪಟ್ಟಿವೆ.
ಗ್ರಾಮಕ್ಕೆ ಅನತಿ ದೂರದ ಮೇಳಾಪುರ ಸಂಪರ್ಕ ರಸ್ತೆ ಪಕ್ಕದಲ್ಲಿ ಬೀಡುಬಿಟ್ಟಿರುವ ತರೂರು ಗ್ರಾಮದ ಶಿವರಾಜು, ರಂಗನಾಥ, ಪೂಜಾರಪ್ಪ ಮತ್ತು ಮಹಾಲಿಂಗಪ್ಪ ಎಂಬುವವರಿಗೆ ಸೇರಿದ ಕುರಿಗಳು ನಿಗೂಢವಾಗಿ ಅಸು ನೀಗಿವೆ. ಇನ್ನೂ 10ಕ್ಕೂ ಹೆಚ್ಚು ಕುರಿಗಳು ಅಸ್ವಸ್ಥಗೊಂಡಿವೆ. ಕೇವಲ 24 ಗಂಟೆಗಳಲ್ಲಿ ಇಷ್ಟು ಕುರಿಗಳು ಮೃತಪಟ್ಟಿರುವುದು ಕುರಿಗಳ ಮಾಲೀಕರಲ್ಲಿ ಆತಂಕ ಹುಟ್ಟಿಸಿದೆ. ಸ್ಥಳಕ್ಕೆ ಅರಕೆರೆ ಠಾಣೆ ಪೊಲೀಸರು ಭೇಟಿ ನೀಡಿ ಮಹಜರು ನಡೆಸಿದ್ದಾರೆ.