ಕೆ.ಆರ್.ಪೇಟೆ: ತಾಲ್ಲೂಕಿನಾದ್ಯಂತ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ತಾಲ್ಲೂಕು ಆಡಳಿತ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಪಕ್ಷ ಬೇಧ ಮರೆತು ಸದಸ್ಯರು ತಾಲ್ಲೂಕು ಪಂಚಾಯಿತಿಯ ಸಾಮಾನ್ಯಸಭೆಯಲ್ಲಿ ಒತ್ತಾಯಿಸಿದರು.
ತಾ.ಪಂ. ಅಧ್ಯಕ್ಷೆ ಅಧ್ಯಕ್ಷೆ ಜಯಲಕ್ಷ್ಮಿ ಸ್ವಾಮಿನಾಯಕ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು.
ಉಪಾಧ್ಯಕ್ಷ ಜಾನಕೀರಾಮು, ಸ್ಥಾಯಿಸಮಿತಿ ಅಧ್ಯಕ್ಷ ವಿಜಯ್ಕುಮಾರ್ ಉಪಸ್ಥಿತಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ , ವಿದ್ಯುತ್ ಸಮಸ್ಯೆ, ಹೇಮಾವತಿ ನದಿಯಲ್ಲಿ ನೀರು ಬರಿದಾಗಿರುವುದರಿಂದ ಬಹುಗ್ರಾಮ ಕುಡಿಯುವ ನೀರಿಗೆ ಆಗಿರುವ ತೊಂದರೆ, ಜಾನುವಾರುಗಳಿಗೆ ಉಂಟಾಗಿರುವ ಮೇವಿನ ಸಮಸ್ಯೆ, ಕೃಷಿ ಇಲಾಖೆಯಲ್ಲಿ ಪರಿಕರಗಳ ವಿತರಣೆಗೆ ಲಂಚಕ್ಕೆ ಒತ್ತಾಯಿಸುತ್ತಿರುವುವುದು ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಸದಸ್ಯರು ಪ್ರಸ್ತಾಪಿಸಿದರು.
ಕಾರ್ಯಕ್ರಮ ಅನುಷ್ಠಾನದಲ್ಲಿ ಆಗುತ್ತಿರುವ ವೈಫಲ್ಯಗಳ ಬಗ್ಗೆ ಹಲವು ಸದಸ್ಯರು ಪ್ರಸ್ತಾಪಿಸಿದರು. ಸರ್ಕಾರದ ಪ್ರತಿಯೊಂದು ಕಾರ್ಯಕ್ರಮಗಳ ಬಗ್ಗೆ ಅಗತ್ಯ ಮಾಹಿತಿಯನ್ನು ಸದಸ್ಯರಿಗೆ ಅಧಿಕಾರಿಗಳು ನೀಡಬೇಕಲ್ಲದೆ, ಸೂಕ್ತ ಗೌರವ ನೀಡಬೇಕು. ಅವುಗಳ ಯಶಸ್ವಿ ಅನುಷ್ಠಾನಕ್ಕೆ ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಅಕ್ಕಿಹೆಬ್ಬಾಳು ತಾ.ಪಂ. ಕ್ಷೇತ್ರದ ಸದಸ್ಯೆ ವಿನುತಾ ಸುರೇಶ್ ಮಾತನಾಡಿ ‘ನನ್ನ ಮಾತುಗಳಿಗೆ ಕೃಷಿ ಇಲಾಖೆಯ ಅಧಿಕಾರಿಗಳು ಗೌರವ ಕೊಡುತ್ತಿಲ್ಲ. ರೈತರು ಹಣ ನೀಡದಿದ್ದರೆ ಕೃಷಿ ಪರಿಕರಗಳನ್ನು ವಿತರಿಸುತ್ತಿಲ್ಲ.
ಈ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಂಡು ಮೇಲಧಿಕಾರಿಗೆ ಪತ್ರ ಬರೆಯಿರಿ ಎಂದು ಆಗ್ರಹಿಸಿದರು. ಇದಕ್ಕೆ ಇತರ ಸದಸ್ಯರೂ ದನಿಗೂಡಿಸಿದರು. ತಾ.ಪಂ. ಅಧ್ಯಕ್ಷೆ ಜಯಲಕ್ಷ್ಮಿ ಮಾತನಾಡಿ, ‘ನಿಮ್ಮ ವರ್ತನೆ ಬದಲಿಸಿಕೊಳ್ಳಿ ಇಲ್ಲದಿದ್ದರೆ ಕಠಿಣ ನಿರ್ಣಯ ಕೈಗೊಳ್ಳಲಾಗುವುದು ಎಂದು’ ಅಧಿಕಾರಿಗಳಿಗೆ ಎಚ್ಚರಿಸಿದರು.
ಮಧ್ಯ ಪ್ರವೇಶಿಸಿದ ತಾ.ಪಂ. ಉಪಾಧ್ಯಕ್ಷ ಜಾನಕೀರಾಂ ಮಾತನಾಡಿ, ಅಧಿಕಾರಿಗಳು ಸರಿಯಾಗಿ ನಡೆದುಕೊಳ್ಳದಿದ್ದರೆ ಮುಂದಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಸದಸ್ಯರನ್ನು ಸಮಾಧಾನಗೊಳಿಸಿದರು.
ಯಾವುದೇ ಗ್ರಾಮಕ್ಕೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಸೆಸ್ಕ್ ಅಧಿಕಾರಿಗಳು ಕುಡಿಯುವ ನೀರು ವಿಭಾಗದ ವಿದ್ಯುತ್ ಪರಿವರ್ತಕಗಳು ಸುಟ್ಟು ಹೋದರೆ 24 ಗಂಟೆಯೊಳಗೆ ಬದಲಿ ಪರಿವರ್ತಕವನ್ನು ಅಳವಡಿಸಬೇಕು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು. ತಾ.ಪಂ ಕಾರ್ಯನಿರ್ವಹಣಾಧಿಕಾರಿ ಚಂದ್ರಮೌಳಿ ಇದ್ದರು.