ಕೆ.ಆರ್.ಪೇಟೆ: ಪೊಲೀಸ್ ಇಲಾಖೆಯ ನೌಕರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಡೆಸುತ್ತಿರುವ ಪ್ರತಿಭಟನೆಗೆ ಜಿಲ್ಲಾ ಸಿಐಟಿಯು ಮತ್ತು ಗ್ರಾಮ ಪಂಚಾಯಿತಿ ನೌಕರರ ಸಂಘವು ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ಮಂಡ್ಯ ಜಿಲ್ಲಾ ಸಿಐಟಿಯು ಕಾರ್ಯದರ್ಶಿ ರಾಮಕೃಷ್ಣ ತಿಳಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಾಮರ್ಥ್ಯ ಸೌಧದ ಆವರಣದಲ್ಲಿ ನಡೆದ ತಾಲ್ಲೂಕು ಗ್ರಾಮ ಪಂಚಾಯಿತಿ ನೌಕಕರ ಸಂಘ ಮತ್ತು ಸಿಐಟಿಯು ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ದಿನದ 24 ಗಂಟೆ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಇಲಾಖೆಯ ನೌಕರರಿಗೆ ಸರ್ಕಾರವು ವೈಜ್ಞಾನಿಕ ವೇತನ ನೀಡದೆ ಅವರಿಗೆ ತೊಂದರೆ ನೀಡುತ್ತಿದೆ. ಅನಿವಾರ್ಯ ಕಾರಣಗಳಲ್ಲಿಯೂ ರಜೆ ನೀಡುವುದಕ್ಕೆ ಮೀನಮೇಷ ಎಣಿಸಲಾಗುತ್ತಿದೆ. ಸೇವಾ ಅವಧಿಯಲ್ಲಿ ತೊಂದರೆಗೀಡಾದ ಪೊಲೀಸ್ ಸಿಬ್ಬಂದಿ ಕುಟುಂಬಕ್ಕೆ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದರು.
ತಾಲ್ಲೂಕು ಗ್ರಾ.ಪಂ. ನೌಕರರ ಸಂಘದ ಅಧ್ಯಕ್ಷ ಮೋದೂರು ನಾಗರಾಜು, ಉಪಾಧ್ಯಕ್ಷ ಎಂ.ಕೆ. ಕುಮಾರ್ ಮತ್ತಿಘಟ್ಟ, ಜಿಲ್ಲಾ ಕಾರ್ಯದರ್ಶಿ ನಂಜಯ್ಯ, ಖಜಾಂಚಿ ಕೃಷ್ಣನಾಯಕ್, ಲಕ್ಷ್ಮಿಪುರ ಮಹಾದೇವ್, ಸಂತೇಬಾಚಹಳ್ಳಿ ಕೃಷ್ಣಮೂರ್ತಿ, ಸಿ.ಎಸ್.ಸೋಮು, ಅಗ್ರಹಾರಬಾಚಹಳ್ಳಿ ನರಸಿಂಹಯ್ಯ ಸಭೆಯಲ್ಲಿ ಹಾಜರಿದ್ದರು.