ಮೇಲುಕೋಟೆ: ‘ಮಳೆ ಪ್ರಮಾಣ ಕುಸಿತವಾದಾಗ ಪರ್ಯಾಯ ಕೃಷಿ ಪದ್ಧತಿ ಅನುಸರಿಸುವ ಅಗತ್ಯವಿದ್ದು, ರೇಷ್ಮೆ ಕೃಷಿ ರೈತರಿಗೆ ಲಾಭದಾಯಕವಾಗಿದೆ’ ಎಂದು ಮಂಡ್ಯ ಜಿಲ್ಲಾ ರೇಷ್ಮೆ ಇಲಾಖೆಯ ಜಂಟಿ ಉಪನಿರ್ದೇಶಕಿ ಪ್ರತಿಭಾ ಹೇಳಿದರು.
ಮೇಲುಕೋಟೆ ಹೋಬಳಿಯ ಜಕ್ಕನಹಳ್ಳಿಯಲ್ಲಿ ರೇಷ್ಮೆ ಇಲಾಖೆ, ಮಂಡ್ಯ ರೇಷ್ಮೆಬೆಳೆಗಾರರ ಒಕ್ಕೂಟ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಕ್ಕನಹಳ್ಳಿ ಮತ್ತು ಮೇಲುಕೋಟೆ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಅಂತರ್ಜಲ ನಿರ್ವಹಣೆ ಮತ್ತು ರೇಷ್ಮೆ ಕೃಷಿ ಮರಗಡ್ಡಿ ಪದ್ಧತಿ’ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಪರ್ಯಾಯ ಮತ್ತು ಲಾಭದಾಯಕ ಬೆಳೆಯಾದ ರೇಷ್ಮೆ ಬೆಳೆಗಾರರಿಗೆ ಇಲಾಖೆ ಹಲವು ಪ್ರೋತ್ಸಾಹ ನೀಡುತ್ತಿದೆ. ಮರಗಡ್ಡಿ ಪದ್ಧತಿಯಲ್ಲಿ ಹಿಪ್ಪುನೇರಳೆ ಬೆಳೆದು ರೇಷ್ಮೆ ಕೃಷಿಯಲ್ಲಿ ತೊಡಗುವ ರೈತರಿಗೆ ಎಕರೆಗೆ ₹ 26 ಸಾವಿರ ಹಾಗೂ ನೇರವಾದ ಪದ್ಧತಿಯಲ್ಲಾದರೆ ₹ 10 ಸಾವಿರ ಸಹಾಯ ನೀಡುವ ಜೊತೆಗೆ ಹಲವು ಸೌಲಭ್ಯಗಳನ್ನು ವದಗಿಸಲಾಗುತ್ತದೆ’ ಎಂದು ಹೇಳಿದರು.
‘ಅರಣ್ಯಗಳ ಅಭಿವೃದ್ಧಿಗೆ ಹಿಪ್ಪುನೇರಳೆಯನ್ನು ಮರಗಳಂತೆ ಬೆಳೆಸುವುದು ಸಹ ಪೂರಕವಾಗಿದೆ. ಮಳೆಯಾಶ್ರಿತ ಪ್ರದೇಶದ ರೈತರು ಹೆಚ್ಚಾಗಿ ರೇಷ್ಮೆ ಕೃಷಿಯಲ್ಲಿ ತೊಡಗಿಕೊಂಡರೆ ಇಲಾಖೆ ಅಧಿಕಾರಿಗಳು ಅಗತ್ಯ ಸಹಕಾರ ನೀಡಲಿದ್ದಾರೆ’ ಎಂದರು.
ಸಂಸದ ಸಿ.ಎಸ್.ಪುಟ್ಟರಾಜು ಮಾತನಾಡಿ, ಮೇಲುಕೋಟೆಯ ಸುತ್ತಲ ಹಳ್ಳಿಗಳು ರೇಷ್ಮೆ ಕೃಷಿಗೆ ಉತ್ತಮ ಮಣ್ಣು ಮತ್ತು ವಾತಾವರಣ ಹೊಂದಿವೆ. ರೈತರು ಪ್ರಧಾನ ಕೃಷಿಯೊಂದಿಗೆ ಮರಗಡ್ಡಿ ಪದ್ಧತಿಯಲ್ಲಿ ಹಿಪ್ಪುನೇರಳೆಯನ್ನು ಬೆಳೆದು ರೇಷ್ಮೆ ಕೃಷಿ ಮಾಡಬಹುದು. ಈ ಪದ್ಧತಿಯಲ್ಲಿ ರೈತರು ಹೆಚ್ಚಿನ ಖರ್ಚಿಲ್ಲದೆ ರೇಷ್ಮೆ ಬೆಳೆದು ಹಣಗಳಿಸಬಹುದು’ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಜಕ್ಕನಹಳ್ಳಿ ಗ್ರಾ.ಪಂ ಅಧ್ಯಕ್ಷೆ ಹೇಮಾ ವಹಿಸಿದ್ದರು. ತಾ.ಪಂ ಅಧ್ಯಕ್ಷೆ ರಾಧಮ್ಮ ಕೆಂಪೇಗೌಡ, ಪಿ.ಎಲ್.ಡಿ ಬ್ಯಾಂಕ್ ಸದಸ್ಯ ಅಶ್ವಥ್ ಕುಮಾರೇಗೌಡ, ಹಾಪ್ಕಾಮ್ಸ್ ನಿರ್ದೇಶಕ ಪುಟ್ಟಸ್ವಾಮಿಗೌಡ, ರೇಷ್ಮೆ ಬೆಳೆಗಾರರ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಕೆ.ಬಿ ಶಿವಕುಮಾರ್ರೇಷ್ಮೆ ಮಹೇಶ್ ಕುಮಾರ್, ರವಿಕುಮಾರ್, ರಾಮೇಗೌಡ, ಕೃಷ್ಣೇಗೌಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.