ಮೈಸೂರು: ಚಾಮುಂಡಿ ಬೆಟ್ಟದಲ್ಲಿನ ಬಹು ದಿನದ ಬೇಡಿಕೆಯಾಗಿದ್ದ ಶಿವಾರ್ಚಕರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಾಸಕ ಜಿ.ಟಿ.ದೇವೇಗೌಡ ಶುಕ್ರವಾರ ಚಾಲನೆ ನೀಡಿದರು.
‘ಸಮುದಾಯ ಭವನದ ನಿರ್ಮಾಣ ವೆಚ್ಚ ₹ 40 ಲಕ್ಷ. ಮೊದಲ ಹಂತದಲ್ಲಿ ₹ 12 ಲಕ್ಷ ಅನುದಾನವನ್ನು ನೀಡಿರುವೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಉಳಿದ ಮೊತ್ತವನ್ನು ಶಾಸಕರ ನಿಧಿಯಿಂದ ಕೊಡುವೆ’ ಎಂದು ಶಾಸಕ ಜಿ.ಟಿ.ದೇವೇಗೌಡ ಇದೇ ಸಂದರ್ಭ ತಿಳಿಸಿದರು.
ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಚಾಮುಂಡಿ ಬೆಟ್ಟದಲ್ಲಿರುವ ನಾಯಕರ ಬೀದಿಗೆ ಭೇಟಿ ನೀಡಿದ ಶಾಸಕರು, ‘ಆರು ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ರಸ್ತೆ ಹಾಳಾಗಿದೆ. ಈ ರಸ್ತೆಯ ಮರು ನಿರ್ಮಾಣಕ್ಕೆ ₹ 50 ಲಕ್ಷ ಅನುದಾನ ನೀಡುವೆ’ ಎಂಬ ಭರವಸೆ ನೀಡಿದರು. ರಸ್ತೆಯ ಅಭಿವೃದ್ಧಿಗೆ ಅಂದಾಜು ಪ್ರಸ್ತಾವ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.