ಮೈಸೂರು: ಇಲ್ಲಿನ ನಜರಬಾದಿನ ಚಾಮುಂಡಿ ವಿಹಾರ ಕ್ರೀಡಾಂಗಣ ಬಳಿ ಕಲಾವಿದ ಶಿವರಂಜನ್ ಶಿಥಿಲಗೊಂಡಿದ್ದ ಮ್ಯಾನ್ ಹೋಲ್ ಸುತ್ತಲೂ ವ್ಯಂಗ್ಯ ಚಿತ್ರ ಬರೆದು ನಗರಪಾಲಿಕೆ ಅಧಿಕಾರಿಗಳನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿದ್ದಾರೆ.
ಇಲ್ಲಿನ ಮ್ಯಾನ್ಹೋಲ್ ಹಲವು ತಿಂಗಳುಗಳಿಂದಲೂ ಶಿಥಿಲಗೊಂಡಿತ್ತು. ಈ ಕುರಿತು ಸ್ಥಳೀಯರು ಮೈಸೂರು ಮಹಾನಗರ ಪಾಲಿಕೆಗೆ ಸತತವಾಗಿ ದೂರು ನೀಡಿದ್ದರೂ ಪ್ರಯೋಜನವಾಗಿರಲಿಲ್ಲ. ಇದರಿಂದ ಬೇಸರಗೊಂಡ ನಾಗರಿಕರು ಕಲಾವಿದ ಶಿವರಂಜನ್ ಅವರಿಗೆ ಚಿತ್ರ ಬಿಡಿಸಿ ಜಾಗೃತಿ ಮೂಡಿಸುವಂತೆ ಕೋರಿಕೊಂಡಿದ್ದರು.
ಶಿವರಂಜನ್ ಅವರು ರಾಕ್ಷಸನ ಬಾಯಿಯಲ್ಲಿ ಮ್ಯಾನ್ಹೋಲ್ ಇರುವಂತೆ ಚಿತ್ರ ಬಿಡಿಸಿದ್ದಾರೆ. ಚಿತ್ರ ಬಿಡಿಸಿದ ಕೆಲವೇ ಗಂಟೆಗಳಲ್ಲಿ ನಗರಪಾಲಿಕೆ ಸಿಬ್ಬಂದಿ ದುರಸ್ತಿ ಕಾರ್ಯ ನಡೆಸಿದೆ.
ನಾಗರಿಕ ಪ್ರಜ್ಞೆ ಎಲ್ಲರಿಗೂ ಇರಬೇಕು. ಸಾರ್ವಜನಿಕ ಆಸ್ತಿಯನ್ನು ಉಳಿಸಿಕೊಳ್ಳಬೇಕು. ಇದಕ್ಕಾಗಿ ಈ ಸಣ್ಣ ಪ್ರಯತ್ನ ಮಾಡಿದ್ದೆ ಎಂದು ಶಿವರಂಜನ್ ಪ್ರತಿಕ್ರಿಯಿಸಿದರು.