ನಂಜನಗೂಡು/ಉಡುಪಿ: ಕಾರ್ಕಳ ತಾಲ್ಲೂಕಿನ ಅಬ್ಬಾಸ್ ಕಟ್ಟಿಂಗೇರಿ ಬಳಿ ಶನಿವಾರ ಸಂಜೆ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಪೈಕಿ ತಾಲ್ಲೂಕಿನ ಇಬ್ಬರು ಬಾಣಸಿಗರೂ ಸೇರಿದ್ದಾರೆ.
ಅಂಬಳೆ ಗ್ರಾಮದ ಶಂಭುಲಿಂಗಪ್ಪ ಪುತ್ರ ಮಹದೇವಸ್ವಾಮಿ (36) ಹಾಗೂ ಶಿವಯ್ಯ ಪುತ್ರ ಬಸವರಾಜು (24) ಮೃತಪಟ್ಟವರು. ಸುನಿಲ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರ ಪೈಕಿ ಬಸವರಾಜು ಅವರಿಗೆ ಅದೇ ಗ್ರಾಮದ ಯುವತಿಯೊಬ್ಬರ ಜತೆ ಮದುವೆ ನಿಶ್ಚಯವಾಗಿತ್ತು.
ಪ್ರವಾಸಕ್ಕೆ ಹೊರಟಿದ್ದವರಿಗೆ ಅಡುಗೆ ಮಾಡಲೆಂದು ಈ ಮೂವರು ತೆರಳಿದ್ದರು. ಘಟನೆಯಿಂದ ಇಡೀ ಗ್ರಾಮದಲ್ಲಿ ಶೋಕದ ವಾತಾವರಣ ನೆಲೆಸಿದೆ.
ಮಹದೇವಸ್ವಾಮಿ ಅವರನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಇವರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ.
‘ಕಂಪನಿಯಿಂದ ಅಧಿಕೃತವಾಗಿ ಅವರನ್ನು ಪ್ರವಾಸಕ್ಕೆ ಕಳುಹಿಸಿಕೊಟ್ಟಿರಲಿಲ್ಲ. ಅವರೇ ವೈಯಕ್ತಿಕವಾಗಿ ಹೋಗಿದ್ದರು. ಕಾರ್ಕಳದಿಂದ ಮೃತದೇಹಗಳನ್ನು ತರಲು ಕಂಪನಿ ವತಿಯಿಂದಲೇ ವಾಹನ ಸೌಕರ್ಯ ಕಲ್ಪಿಸಲಾಗಿದೆ. ಸಾಧ್ಯವಿರುವ ಎಲ್ಲ ನೆರವನ್ನೂ ನೀಡಲಾಗಿದೆ’ ಎಂದು ವೈಟಲ್ ರೆಕಾರ್ಡ್ಸ್ ಕಂಪನಿಯ ಆಕಾಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ಅಪಘಾತದಲ್ಲಿ ಮೃತಪಟ್ಟ ಚಾಮುಂಡಿಬೆಟ್ಟದ ನಿವಾಸಿ, ಆರ್.ಯೋಗೀಂದ್ರ (24), ಶ್ರೀರಂಗಪಟ್ಟಣದ ಮೊಗೇರಳ್ಳಿಯ ಇ.ವಿನುತಾ (28), ಬೋಗಾದಿಯ ರಕ್ಷಿತಾ (27), ಜೆಎಸ್ಎಸ್ ಲೇಔಟ್ನ ಅನುಜ್ಞಾ (26), ನಂಜನಗೂಡಿನ ಅಂಬಳೆಯ ಬಸವರಾಜ್ (24), ಮಹೇಶ್ (38) ಗುರುತು ಪತ್ತೆಯಾಗಿದೆ. ಆದರೆ, ಪ್ರೀತಮ್ (21), ರಾಧಾರವಿ (22), ಮಾರುತಿ ವಿಳಾಸ ಪತ್ತೆಯಾಗಿಲ್ಲ. ಈ ಕಾರಣದಿಂದ ಮೂವರ ಮೃತದೇಹಗಳ ಮರಣೋತ್ತರ ಪರೀಕ್ಷೆ ಇನ್ನೂ ನಡೆದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡಿರುವ 24 ಮಂದಿಗೆ ಕಾರ್ಕಳದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರವಾಗಿ ಗಾಯಗೊಂಡಿರುವ ಐವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಯಮುನಾ (ಕೊಳ್ಳೆಗಾಲದ ಉತ್ತರಹಳ್ಳಿ), ಲಕ್ಷ್ಮೀ, ಪ್ರದೀಪ್ (ತಿ.ನರಸೀಪುರದ ಭೈರಪುರ), ಆರ್.ಕಾವ್ಯ, ಜಿ.ಎನ್.ಕಾವ್ಯ (ಮೈಸೂರಿನ ಮಾತಳ್ಳಿ), ಎಂ.ವಿ.ಕಾವ್ಯಾ (ಕೊಡಗಿನ ಕುಶಾಲನಗರ), ರಘುವೀರ್, ಸಿ.ಸತೀಶ್, ವಿ.ಜಿ.ರಂಜಿತಾ (ಮೈಸೂರಿನ ಹೆಬ್ಬಾಳ 1ನೇ ಹಂತ) ಐಸಿಯು ಹಾಗೂ ತುರ್ತು ನಿಗಾ ಘಟಕದ ವಾರ್ಡ್ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೇಘಾಶ್ರೀ, ದಿವ್ಯಾಶ್ರೀ, ವಿದ್ಯಾ, ಸುಷ್ಮಾ, ಪೂರ್ಣಿಮಾ, ಹರ್ಷಿತಾ, ನಂಜುಡಸ್ವಾಮಿ, ದೀಪಿಕಾ, ಅಂಬಿಕಾ, ಮಂಜುಳಾ ಅವರಿಗೆ ಕಾರ್ಕಳದ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಾನಸಾ, ಶ್ವೇತಾ, ಕೆ.ಎಸ್.ಸುಷ್ಮಾ, ನಳಿನಿ, ಸಿ.ಸುನೀಲ್, ಮುತ್ತುರಾಜ್, ಜಗದೀಶ್ ಅವರಿಗೆ ಕಾರ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.