ಮೈಸೂರು: ’ಶರಣರ ಸಾಹಿತ್ಯದಲ್ಲಿ ಬಸವಣ್ಣ ಅತ್ಯುನ್ನತ ಸ್ಥಾನದಲ್ಲಿದ್ದಾರೆ’ ಎಂದು ವಿಶ್ರಾಂತ ಪ್ರಾಧ್ಯಾಪಕ ಡಾ.ಮಳಲಿ ವಸಂತ ಕುಮಾರ್ ಹೇಳಿದರು.
ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶರಣು ವಿಶ್ವ ವಚನ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಭಾನುವಾರ ಆಯೋಜಿಲಾಗಿದ್ದ ಡಾ.ಪ್ರಸನ್ನ ಸಂತೆಕಡೂರು ಅವರ ’ಎತ್ತಣ ಅಲ್ಲಮ–ಎತ್ತಣ ರಮಣ?’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಭಾರತ ಆಧ್ಯಾತ್ಮ ಪ್ರಧಾನ ದೇಶ. ಇದನ್ನು ವಿಶ್ವಕ್ಕೆ ತಿಳಿಸಿಕೊಟ್ಟವರು ಸ್ವಾಮಿ ವಿವೇಕಾನಂದರು. ಹಾಗೆಯೇ ಬಸವಣ್ಣನ ಬಗ್ಗೆ ಮೊದಲಿಗೆ ಸಮಾಜಕ್ಕೆ ತಿಳಿಸಿಕೊಟ್ಟವರು ಕುವೆಂಪು. ಅಲ್ಲಮ ಮತ್ತು ಬಸವಣ್ಣನ ತತ್ವ ಸಿದ್ಧಾಂತಗಳು ಭಾಗಶಃ ಒಂದೇ ಆಗಿದ್ದವು. ಡಾ.ಪ್ರಸನ್ನ ಸಂತೆಕಡೂರು ತಮ್ಮ ’ಎತ್ತಣ ಅಲ್ಲಮ–ಎತ್ತಣ ರಮಣ? ಕೃತಿಯಲ್ಲಿ ಅಲ್ಲಮನ ಧೋರಣೆಗಳು ರಮಣನ ಮೇಲೆ ಪ್ರಭಾವ ಬೀರಿರುವ ಬಗ್ಗೆ ಪ್ರಬುದ್ಧತೆಯಿಂದ ಅಚ್ಚು ಕಟ್ಟಾಗಿ ಸೂಚಿಸಿದ್ದಾರೆ’ ಎಂದರು.
ಡಾ.ಸಿ.ಜಿ.ಉಷಾದೇವಿ, ಲೇಖಕ ಪ್ರಸನ್ನ ಮಾತನಾಡಿ ‘ಸಂತೆಕಡೂರು ಕೃತಿ ರಚಿಸಿರುವುದು ಸೋಜಿಗ. ಕೃತಿಯಲ್ಲಿ ಆಧ್ಯಾತ್ಮವನ್ನು ಸರಳವಾಗಿ ತಿಳಿಸುವುದರ ಜತೆ, ಅಲ್ಲಮ ಮತ್ತು ರಮಣರನ್ನು ಒಟ್ಟಾಗಿ ಪರಿಚಯಿಸಿರುವ ಚಿತ್ರಣ ಉತ್ತಮವಾಗಿದೆ’ ಎಂದರು.
ಲೇಖಕ ಡಾ.ಪ್ರಸನ್ನ ಸಂತೆಕಡೂರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಶರಣು ವಿಶ್ವವಚನ ಸಂಸ್ಥೆಯ ಸಂಸ್ಥಾಪಕರಾದ ವಚನ ಕುಮಾರಸ್ವಾಮಿ, ರೂಪಾ ಕುಮಾರಸ್ವಾಮಿ, ಅನಿಲ್ ಕುಮಾರ್ ವಾಜಂತ್ರಿ, ವಿಜಯ ಕುಮಾರ್ ಇದ್ದರು.