ಮೈಸೂರು: ‘ಕನ್ನಡ ನಾಡಿನಲ್ಲಿ ಜಾತಿ ಮೇಲೆ ತೋರುವ ಪ್ರೀತಿ, ಕಾಳಜಿಯನ್ನು ಭಾಷೆ ಮೇಲೆ ತೋರುತ್ತಿಲ್ಲ. ಇದರಿಂದಲೇ ಕನ್ನಡಕ್ಕೆ ಈ ಸ್ಥಿತಿ ಬಂದೊದಗಿದೆ. ಕನ್ನಡಕ್ಕಾಗಿ ಚಳವಳಿ, ಹೋರಾಟ ಮಾಡುತ್ತಲೇ ಇರ ಬೇಕಾದ ಅನಿವಾರ್ಯ ಇದೆ’ ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಅಧ್ಯಕ್ಷ ಆರ್.ರಘು (ಕೌಟಿಲ್ಯ) ಹೇಳಿದರು.
ಕನ್ನಡ ಚಳವಳಿ ಕೇಂದ್ರ ಸಮಿತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ ನಗರ ಘಟಕ ವತಿಯಿಂದ ಸೋಮವಾರ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ರಾಜ್ಯೋತ್ಸವ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಹೆಚ್ಚಿನ ಉತ್ತರ ಭಾರತೀಯರಿಗೆ ಕನ್ನಡ ಮತ್ತು ಕರ್ನಾಟಕ ಗೊತ್ತಿಲ್ಲ. ಆದರೆ, ಬೆಂಗಳೂರು ಗೊತ್ತಿದೆ. ಇತರೆ ಭಾಷಿಗರಂತೆ ಇರುವ ಆಕ್ರಮಣಕಾರಿ ಮನೋಭಾವ ಕನ್ನಡಿಗರಿಗಿಲ್ಲ ಎಂದು ಅವರು ಹೇಳಿದರು.
ಅಂದು ಕನ್ನಡಪರ ಹೋರಾಟಗಾರರು ಕನ್ನಡದ ಅಸ್ತಿತ್ವಕ್ಕಾಗಿ ಹೋರಾಟ ನಡೆಸಿದ್ದರು. ಇಂದು ಕನ್ನಡ ಚಳವಳಿ ಮೂಲಕ ತಮ್ಮ ಅಸ್ತಿತ್ವ ಕಂಡುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ನುಡಿದರು.
ಪ್ರಾಚ್ಯವಿದ್ಯಾ ಸಂಶೋಧನಾ ಸಂಸ್ಥೆ ನಿರ್ದೇಶಕ ಪ್ರೊ.ಎಸ್.ಶಿವರಾಜಪ್ಪ, ‘ಅನ್ಯಭಾಷಿಕರು, ಹೊರಗಿನ ಕೈಗಾರಿಕೋದ್ಯಮಿಗಳು ರಾಜ್ಯ ಆಳುತ್ತಿದ್ದಾರೆ. ಕನ್ನಡದ ಮೇಲೆ ಪ್ರಹಾರ ನಡೆಸುತ್ತಿದ್ದಾರೆ. ಕನ್ನಡಗರಿಗೆ ಉದ್ಯೋಗ ಕೊಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಸನ್ಮಾನ: ಆರ್.ರಘು (ಕೌಟಿಲ್ಯ), ಕಾಡಾ ಅಧ್ಯಕ್ಷ ಶಿವಲಿಂಗಯ್ಯ, ಭಾರತೀಯ ಇತಿಹಾಸ ಸಂಕಲನ ಸಮಿತಿಯ ಉಪಾಧ್ಯಕ್ಷ ಎಸ್.ಬಿ.ಎಂ.ಪ್ರಸನ್ನ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ (ಕರ್ನಾಟಕ ಘಟಕ) ಅಧ್ಯಕ್ಷ ಡಾ.ಸಿ.ವೆಂಕಟೇಶ್ ಅವರನ್ನು ಸನ್ಮಾನಿಲಾಯಿತು.
ಕನ್ನಡ ಚಳವಳಿ ಕೇಂದ್ರ ಸಮಿತಿ ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ, ಕಸಾಪ ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಕಸಾಪ ನಗರ ಘಟಕ ಅಧ್ಯಕ್ಷ ಕೆ.ಎಸ್.ಶಿವರಾಮು, ಕೋದಂಡರಾಮು ಇದ್ದರು.