ಮೈಸೂರು: ಇಲ್ಲಿನ ಚೆಲುವಾಂಬ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಹೆರಿಗೆ ಸಮಯದಲ್ಲಿ ಮಗು ಮೃತಪಟ್ಟಿದೆ ಎಂದು ಆರೋಪಿಸಿ ಮಹಿಳೆಯೊಬ್ಬರ ಸಂಬಂಧಿಕರು ಆಸ್ಪತ್ರೆ ಮುಂದೆ ಗುರುವಾರ ಕೆಲಕಾಲ ಪ್ರತಿಭಟನೆ ನಡೆಸಿದರು.
ನಗರದ ಎನ್.ಆರ್.ಮೊಹಲ್ಲಾದ 23 ವರ್ಷದ ಮಹಿಳೆಯೊಬ್ಬರು ಹೆರಿಗೆಗೆ ಇಲ್ಲಿ ದಾಖಲಾಗಿದ್ದರು. ಇದಕ್ಕೂ ಮುನ್ನ ವೈದ್ಯರು ಮಗುವಿಗೆ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದ್ದರು. ಆದಾಗ್ಯೂ ಹೆರಿಗೆ ಸಮಯದಲ್ಲಿ ಮಗು ಮೃತಪಟ್ಟಿರುವುದು ವೈದ್ಯರ ಕಾರ್ಯವೈಖರಿ ಮೇಲೆ ಸಂಶಯಪಡುವಂತಾಗಿದೆ ಎಂದು ಅವರು ಕಿಡಿಕಾರಿದರು.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ರಾಧಾಮಣಿ, ‘ಹೆರಿಗೆ ಸಮಯದಲ್ಲಿ ಹೊಕ್ಕುಳ ಬಳ್ಳಿ ಸುತ್ತಿಕೊಂಡಿದ್ದರಿಂದ ಮಗುವನ್ನು ಉಳಿಸಲಾಗಲಿಲ್ಲ. ಇದರಲ್ಲಿ ವೈದ್ಯರ ನಿರ್ಲಕ್ಷ್ಯ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.