ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನ ಭವನದಲ್ಲಿ ಇದೇ 24ರಿಂದ 27ರವರೆಗೆ ಶೈಕ್ಷಣಿಕ ವಿಡಿಯೊ ಸ್ಪರ್ಧೆ ವಿಜೇತ ಚಿತ್ರಗಳ ಪ್ರದರ್ಶನ, ಪ್ರಕೃತಿ ಅಂತರರಾಷ್ಟ್ರೀಯ ಸಾಕ್ಷ್ಯಚಿತ್ರೋತ್ಸವ ನಡೆಯಲಿದೆ.
ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ಮತ್ತು ಶೈಕ್ಷಣಿಕ ಸಂವಹನ ಒಕ್ಕೂಟ (ಸಿಇಸಿ) ಆಯೋಜಿಸಿರುವ ಉತ್ಸವವನ್ನು ನ.24ರಂದು ಕ್ರಾಫರ್ಡ್ ಭವನದಲ್ಲಿ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಉದ್ಘಾಟಿಸಲಿದ್ದಾರೆ.
'ಶೈಕ್ಷಣಿಕ ವಿಡಿಯೊ ಸ್ಪರ್ಧೆಯ ವಿಜೇತ ಚಿತ್ರಗಳು, ಸಾಕ್ಷ್ಯಚಿತ್ರಗಳಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ' ಎಂದು ಸಿಇಸಿ ನಿರ್ದೇಶಕ ಪ್ರೊ.ಜಗತ್ ಭೂಷಣ್ ನಡ್ಡ ಅವರು ಮಂಗಳವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
'ನ.24, 25ರಂದು ಶೈಕ್ಷಣಿಕ ವಿಡಿಯೊ ಸ್ಪರ್ಧೆ ವಿಜೇತ 12 ಚಿತ್ರ ಹಾಗೂ ನ.26, 27ರಂದು 17 ಸಾಕ್ಷ್ಯಚಿತ್ರಗಳ ಪ್ರದರ್ಶನ ನಡೆಯಲಿದೆ' ಎಂದರು.
'ಶೈಕ್ಷಣಿಕ ವಿಡಿಯೊ ಸ್ಪರ್ಧೆಯಲ್ಲಿ 137 ಹಾಗೂ ಸಾಕ್ಷ್ಯಚಿತ್ರಕ್ಕೆ 97 ಚಿತ್ರಗಳು ಸ್ಪರ್ಧಿಸಿದ್ದವು. ಇವುಗಳಲ್ಲಿ ಕ್ರಮವಾಗಿ 7 ಮತ್ತು 4 ಚಿತ್ರಗಳನ್ನು ಪ್ರಶಸ್ತಿಗೆ ತೀರ್ಪುಗಾರರ ಮಂಡಳಿ ಆಯ್ಕೆ ಮಾಡಿದೆ' ಎಂದು ಮಾಹಿತಿ ನೀಡಿದರು.
ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್ ಮಾತನಾಡಿ, 'ಸಾಕ್ಷ್ಯಚಿತ್ರೋತ್ಸವ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವುದು ಹೆಮ್ಮೆ' ಎಂದರು.
ಮಾನಸಗಂಗೋತ್ರಿಯ ಶೈಕ್ಷಣಿಕ ಬಹುಮಾಧ್ಯಮ ಸಂಶೋಧನಾ ಕೇಂದ್ರ (ಇಎಂಆರ್ ಸಿ) ನಿರ್ದೇಶಕ ಪ್ರೊ.ಎಚ್.ರಾಜಶೇಖರ್, ಚಿತ್ರೋತ್ಸವ ಸಂಯೋಜಕ ಡಾ.ಸುನಿಲ್ ಮೆಹ್ರು ಇದ್ದರು.