ಚಿಕ್ಕಮಗಳೂರು: ‘ಯಾವ ಸುಳ್ಳು ಹೇಳಿದ್ದೇನೆ ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಬೇಕು. ಅದನ್ನು ಜನರ ಮುಂದೆ ಇಟ್ಟರೆ ಚರ್ಚೆ ಮಾಡಬಹುದು’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಬ್ಬರೇ ಸತ್ಯಹರಿಶ್ಚಂದ್ರ ಉಳಿದವರೆಲ್ಲ ಸುಳ್ಳುಗಾರರು, ನಿಗಾ ಇಟ್ಟು ಮಾತನಾಡಬೇಕು. ಸುಳ್ಳು ಹೇಳಿ ರಾಜ್ಯದ ಜನತೆಗೆ ದ್ರೋಹ ಮಾಡಿ ಸಿದ್ದರಾಮಯ್ಯ ಅಕ್ರಮವಾಗಿ ಹಣ ಸಂಪಾದನೆಯಲ್ಲಿ ತೊಡಗಿದ್ದಾರೆ’ ಎಂದು ದೂಷಿಸಿದರು.
‘ಎಚ್.ಡಿ.ದೇವೇಗೌಡ ಅವರ ಶಕ್ತಿ ಏನು ಎಂಬುದನ್ನು ಇದೇ 15ರಂದು ಜನರು ತೋರಿಸುತ್ತಾರೆ. ಸಿದ್ದರಾಮಯ್ಯ ಅವರ ರಾಜಕೀಯ ಬೆಳವಣಿಗೆಗೆ ದೇವೇಗೌಡರ ಕೊಡುಗೆ ಏನು ಎಂಬುದನ್ನು ಸಿಂಧ್ಯ ಅವರನ್ನು ಕೇಳಿದರೆ ಎಲ್ಲ ಹೇಳುತ್ತಾರೆ’ ಎಂದು ಉತ್ತರಿಸಿದರು.
‘ನಟ, ಕಾಂಗ್ರೆಸ್ ಮುಖಂಡ ಅಂಬರೀಷ್ ಅವರೊಂದಿಗೆ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಚರ್ಚೆ ಮಾಡಿದ್ದೇವೆ. ಅವರು ನುರಿತ ಮತ್ತು ಅನುಭವಿ ರಾಜಕಾರಣಿ. ಯಾರದೋ ಒತ್ತಾಯಕ್ಕೆ ಮಣಿಯುವವರಲ್ಲ. ಸರಿಯಾದ ಸಮಯದಲ್ಲಿ ಅವರು ನಿರ್ಧಾರ ಪ್ರಕಟಿಸುತ್ತಾರೆ’ ಎಂದು ಪ್ರತಿಕ್ರಿಯಿಸಿದರು.