ಮೈಸೂರು: ಇಲ್ಲಿನ ಮಾನಂದವಾಡಿ ರಸ್ತೆಯ ನೆಲ್ಲೂರು ಶೆಡ್ ಬಡಾವಣೆಯಲ್ಲಿ ಅಳವಡಿಸಿದ್ದ ಬುದ್ಧನಗರ ಎಂಬ ನಾಮಫಲಕಕ್ಕೆ ಮಂಗಳವಾರ ರಾತ್ರಿ ದುಷ್ಕರ್ಮಿಗಳು ಬೆಂಕಿ ಹಚ್ಚಿ ವಿರೂಪಗೊಳಿಸಿದ್ದಾರೆ.
ಈ ನಾಮಫಲಕದಲ್ಲಿ ಬುದ್ಧ, ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್, ಬಾಬುಜಗಜೀವನರಾಂ ಅವರ ಭಾವಚಿತ್ರಗಳೂ ಇದ್ದು, ಇವೂ ಹಾನಿಗೀಡಾಗಿವೆ.ಅ. 12ರಂದು ನೆಲ್ಲೂರು ಶೆಡ್ ಎಂಬ ನಾಮಫಲಕಕ್ಕೆ ಬದಲಾಗಿ ಬುದ್ಧನಗರ ಎಂಬ ನಾಮಫಲಕವನ್ನು ಅಳವಡಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಅಶೋಕಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಬ್ಬಾಳದಲ್ಲಿ ಕಳ್ಳತನ
ಮೈಸೂರು: ಇಲ್ಲಿನ ಹೆಬ್ಬಾಳದ ಲಕ್ಷ್ಮೀಕಾಂತನಗರದ ನಿವಾಸಿ ಪುನೀತ್ ಎಂಬುವವರ ಮನೆಯಲ್ಲಿ ಕಳ್ಳರು ₹ 70 ಸಾವಿರ ನಗದನ್ನು ಕಳವು ಮಾಡಿದ್ದಾರೆ.
ಪುನೀತ್ ಅವರು ನ. 14ರಂದು ಮನೆಗೆ ಬೀಗ ಹಾಕಿಕೊಂಡು ಸಂಸಾರ ಸಮೇತರಾಗಿ ದೀಪಾವಳಿ ಹಬ್ಬಕ್ಕಾಗಿ ಊರಿಗೆ ಹೋಗಿದ್ದರು. ಬುಧವಾರ ಬೆಳಿಗ್ಗೆ ಮನೆಗೆ ಬಂದಾಗ ಡೋರ್ಲಾಕ್ ಮುರಿದಿರುವುದು ಗೊತ್ತಾಗಿದೆ. ಮನೆಯ ಬೀರುವಿನಲ್ಲಿಟ್ಟಿದ್ದ ₹ 70 ಸಾವಿರ ನಗದು ಕಳವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಬ್ಬಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.