ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಆಹಾರ ಭದ್ರತೆಗಾಗಿ ಕೈಜೋಡಿಸಿದ ಕೇಂದ್ರ

ಬಿಪಿಎಲ್‌ ಪಡಿತರ ಚೀಟಿ ಹೊಂದಿದವರಿಗೆ ಕೇಂದ್ರದಿಂದ ಅಕ್ಕಿ, ಬೇಳೆ ವಿತರಣೆ
Last Updated 22 ಮೇ 2020, 20:00 IST
ಅಕ್ಷರ ಗಾತ್ರ

ಮೈಸೂರು: ಲಾಕ್‌ಡೌನ್‌ನ ಸಂಕಷ್ಟದಲ್ಲಿ ಸಿಲುಕಿರುವ ಬಡ ಕುಟುಂಬಗಳ ಹಸಿವು ನೀಗಿಸಲು ಇದೀಗ ಕೇಂದ್ರ ಸರ್ಕಾರವೂ ಮುಂದಾಗಿದೆ.

ಬಿಪಿಎಲ್‌ ಪಡಿತರ ಚೀಟಿ ಹೊಂದಿರುವ ಪ್ರತಿ ಕುಟುಂಬದ ಒಬ್ಬ ವ್ಯಕ್ತಿಗೆ ತಿಂಗಳಿಗೆ ತಲಾ 5 ಕೆ.ಜಿ. ಅಕ್ಕಿ ಹಾಗೂ 1 ಕಾರ್ಡ್‌ಗೆ 1 ಕೆ.ಜಿ ತೊಗರಿ ಬೇಳೆಯನ್ನು ‘ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಅನ್ನ’ ಯೋಜನೆಯಡಿ ವಿತರಿಸುತ್ತಿದೆ.

ಏಪ್ರಿಲ್‌, ಮೇ ತಿಂಗಳ ಅಕ್ಕಿ ಹಾಗೂ ಏಪ್ರಿಲ್ ತಿಂಗಳ ತೊಗರಿ ಬೇಳೆಯನ್ನು ಮೇ 1ರಿಂದ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸುತ್ತಿದ್ದು, ಕೆಲವೇ ದಿನಗಳಲ್ಲಿ ವಿತರಣೆಯ ನಿಗದಿತ ಗುರಿ ಮುಟ್ಟಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಮೈಸೂರು ಜಿಲ್ಲಾ ಜಂಟಿ ನಿರ್ದೇಶಕ ಪಿ.ಶಿವಣ್ಣ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಮೈಸೂರು ಜಿಲ್ಲೆಯಲ್ಲಿ 7,06,197 ಕುಟುಂಬಗಳು ಬಿಪಿಎಲ್ ಪಡಿತರ ಚೀಟಿ ಹೊಂದಿವೆ. ಈಗಾಗಲೇ 6.53 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಕೇಂದ್ರದ ಪಡಿತರ ವಿತರಿಸಲಾಗಿದೆ. ಶೇ 93ರಷ್ಟು ಕುಟುಂಬಗಳಿಗೆ ಪಡಿತರ ವಿತರಿಸಿದ್ದು, ಉಳಿದ ಕುಟುಂಬಗಳಿಗೂ ಪಡಿತರವನ್ನು ಕೊಡುತ್ತಿದ್ದೇವೆ’ ಎಂದು ಹೇಳಿದರು.

‘ಕೇಂದ್ರದ ಪಡಿತರ ವಿತರಿಸುವಲ್ಲಿ ಮೈಸೂರು ಜಿಲ್ಲೆ ರಾಜ್ಯದಲ್ಲೇ 8ನೇ ಸ್ಥಾನದಲ್ಲಿದೆ. ಈಗಿನ ಲೆಕ್ಕಾಚಾರದಂತೆ ಶೇ 97ರಷ್ಟು ಕುಟುಂಬಗಳಿಗೆ ಅಕ್ಕಿ, ತೊಗರಿಬೇಳೆ ನೀಡುತ್ತೇವೆ. ಮೇ ತಿಂಗಳ ತೊಗರಿ ಬೇಳೆಯನ್ನು ಜೂನ್‌ ತಿಂಗಳ ಪಡಿತರ ವಿತರಿಸುವ ಸಂದರ್ಭ ಕೊಡಲಾಗುವುದು’ ಎಂದು ತಿಳಿಸಿದರು.

ಎರಡನೇ ಸ್ಥಾನ: ರಾಜ್ಯ ಸರ್ಕಾರ ಲಾಕ್‌ಡೌನ್‌ನ ಸಂಕಷ್ಟದಲ್ಲಿದ್ದ ಬಡವರಿಗೆ ಏಪ್ರಿಲ್‌–ಮೇ ತಿಂಗಳ ಪಡಿತರವನ್ನು ಒಮ್ಮೆಗೆ ವಿತರಿಸಿತ್ತು. ಬಿಪಿಎಲ್‌ ಪಡಿತರ ಚೀಟಿ ಹೊಂದಿದ್ದ ಒಬ್ಬ ವ್ಯಕ್ತಿಗೆ ಎರಡು ತಿಂಗಳ ಪಡಿತರವಾಗಿ 10 ಕೆ.ಜಿ. ಅಕ್ಕಿ ನೀಡಿದರೆ, ಒಂದು ಕಾರ್ಡ್‌ಗೆ 2 ಕೆ.ಜಿ ಗೋಧಿಯಂತೆ 4 ಕೆ.ಜಿ ಗೋಧಿ ನೀಡಿತ್ತು.

ಈ ವಿತರಣೆಯಲ್ಲಿ ಜಿಲ್ಲೆ ರಾಜ್ಯದಲ್ಲೇ ಎರಡನೇ ಸ್ಥಾನ ಪಡೆದಿದೆ. ಶೇ 98ರಷ್ಟು ಕುಟುಂಬಗಳಿಗೆ ಪ‍ಡಿತರವನ್ನು ವಿತರಿಸಿದೆ ಎಂದು ಶಿವಣ್ಣ ಮಾಹಿತಿ ನೀಡಿದರು.

ವಲಸೆ ಕಾರ್ಮಿಕರಿಗೂ 5 ಕೆ.ಜಿ ಅಕ್ಕಿ
‘ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಅನ್ನ’ ಯೋಜನೆಯಡಿ ಪಡಿತರ ಚೀಟಿ ಹೊಂದಿಲ್ಲದ ಪ್ರತಿಯೊಬ್ಬ ವಲಸೆ ಕಾರ್ಮಿಕರಿಗೂ ಒಮ್ಮೆ 5 ಕೆ.ಜಿ. ಅಕ್ಕಿ ವಿತರಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.

‘ಕಾರ್ಮಿಕ ಇಲಾಖೆ 3,087 ವಲಸೆ ಕಾರ್ಮಿಕರ ಪಟ್ಟಿ ನೀಡಿದೆ. ಇವರಿಗೆ ಜೂನ್ ತಿಂಗಳಲ್ಲಿ ಪಡಿತರ ನೀಡಲಾಗುವುದು. ಪಾಲಿಕೆ, ತಾಲ್ಲೂಕು ಆಡಳಿತದಿಂದಲೂ ವಲಸೆ ಕಾರ್ಮಿಕರ ಪಟ್ಟಿ ಕೇಳಲಾಗಿದೆ. ಅವರು ನೀಡುವ ಪಟ್ಟಿಯಂತೆ ಕೇಂದ್ರದ ಯೋಜನೆಯಡಿ ಪಡಿತರ ನೀಡುತ್ತೇವೆ’ ಎಂದು ಪಿ.ಶಿವಣ್ಣ ತಿಳಿಸಿದರು.

ಅಂಕಿ–ಅಂಶ

7,06,197:ಬಿಪಿಎಲ್ ಕುಟುಂಬಗಳಿಗೆ ಪಡಿತರ ವಿತರಣೆ ಗುರಿ

6.53 ಲಕ್ಷ:ಕುಟುಂಬಗಳಿಗೆ ಈಗಾಗಲೇ ವಿತರಣೆ

ಶೇ 93ರಷ್ಟು:ಗುರಿ ಸಾಧನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT