ಬಾಲಕಿ ಸದ್ಯ ಆರು ತಿಂಗಳ ಗರ್ಭಿಣಿ. ಆಕೆಯನ್ನು ತಾಯಿ ಹಾಗೂ ಮೈಸೂರಿನಲ್ಲಿದ್ದ ಆಕೆಯ ಸಂಬಂಧಿಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಕರೆ ತಂದಿದ್ದರು. ನಂತರ ಆಪ್ತಸಮಾಲೋಚನೆ ನಡೆಸಿದ ಸಮಿತಿ ಸದಸ್ಯರು, ಪತ್ರವೊಂದನ್ನು ಕೊಟ್ಟು, ಗ್ರಾಮಾಂತರ ಠಾಣೆಗೆ ಹೋಗಿ ದೂರು ದಾಖಲಿಸಿ, ಎಫ್ಐಆರ್ ಪ್ರತಿ ತರಲು ಸೂಚಿಸಿದ್ದರು. ಅವರ ಸೂಚನೆ ಮೇರೆಗೆ ಠಾಣೆಗೆ ತೆರಳಿದಾಗ ಪೊಲೀಸರು, ತಾಯಿಯೊಂದಿಗೆ ತೆರಳಿದ್ದ ಸಂಬಂಧಿಕರ ಮಾಹಿತಿಯನ್ನೂ ಸಂಗ್ರಹಿಸಲು ಆರಂಭಿಸಿದಾಗ ಅವರು ಆಕ್ಷೇಪಿಸಿ, ನಗರದ ಒಡನಾಡಿ ಸಂಸ್ಥೆಯ ನಿರ್ದೇಶಕ ಕೆ.ವಿ.ಸ್ಟ್ಯಾನ್ಲಿ ಅವರ ಗಮನಕ್ಕೆ ತಂದರು. ಅವರು ಕೂಡಲೇ ಆಯೋಗದ ಸದಸ್ಯ ಎಂ.ಎಲ್.ಪರಶುರಾಮ್ ಅವರಿಗೆ ಮಾಹಿತಿ ನೀಡಿದ್ದರು.