ಮೈಸೂರು: ‘ಅಧಿಕಾರಿಗಳನ್ನು ವರ್ಗಾವಣೆ ಮಾಡಿಸೋದೇ ತಾಕತ್ತು ಎನ್ನುವುದಾದರೆ, ಅಂತಹ ತಾಕತ್ತೇ ನನಗೆ ಬೇಡ’ ಎಂದು ಸಂಸದ ಪ್ರತಾಪ ಸಿಂಹ, ಶಾಸಕ ಜಿ.ಟಿ.ದೇವೇಗೌಡರಿಗೆ ಶುಕ್ರವಾರ ಇಲ್ಲಿ ತಿರುಗೇಟು ನೀಡಿದರು.
‘ಸಂಸದನಾಗಿ ನನ್ನ ಕೆಲಸದಲ್ಲಿ ತಾಕತ್ತು ತೋರಿಸಿರುವೆ. ಅದಕ್ಕೆ ಜನ ಉತ್ತರವನ್ನು ನೀಡಿದ್ದಾರೆ. ಮೈಸೂರಿಗೆ ಹೊರಗಿನವನಾದರೂ ಎರಡು ಬಾರಿ ಗೆಲ್ಲಿಸಿದ್ದಾರೆ’ ಎಂದು ಟಾಂಗ್ ಕೊಟ್ಟರು.
‘ವರ್ಗಾವಣೆ ಮಾಡಿಸೋದು ರಾಜಕಾರಣಿಗಳಿಗೆ ಸಹಜ. ನನ್ನ ದೃಷ್ಟಿಯಲ್ಲಿ ಅದು ಅತ್ಯಂತ ಸಣ್ಣ ಕೆಲಸ. ಈ ಸಣ್ಣ ಕೆಲಸವನ್ನು ನಾನು ಎಂದಿಗೂ ಮಾಡಲ್ಲ. ಸರ್ಕಾರ ಕೊಟ್ಟ ಅಧಿಕಾರಿಗಳ ಜೊತೆ ಕೆಲಸ ಮಾಡುವೆ’ ಎಂದರು.
‘ಜಿ.ಟಿ.ದೇವೇಗೌಡರು ನನಗೆ ತಂದೆ ಸಮಾನ. ಅವರ ಪುತ್ರ ಹರೀಶ್ಗೌಡನನ್ನು ಕಂಡಂತೆಯೇ ನನ್ನನ್ನು ಕಾಣುತ್ತಾರೆ. ರಾಜಕೀಯದಲ್ಲಿ ನನ್ನನ್ನು ಬೈಯುವ ಹಕ್ಕು ಅವರಿಗಿದೆ. ಅದನ್ನು ಪ್ರೀತಿಯಿಂದಲೇ ಸ್ವೀಕರಿಸುವೆ. ಕೆ.ಆರ್.ನಗರಕ್ಕೆ ಹೋದಾಗ ಸಾ.ರಾ.ಮಹೇಶ್ ಒಳ್ಳೆಯ ಕೆಲಸ ಮಾಡಿದ್ದರು. ಅದನ್ನು ಪ್ರಶ್ನಿಸಿದ್ದಕ್ಕೆ ಗೌಡರು ಗರಂ ಆಗಿರಬಹುದಷ್ಟೇ’ ಎಂದು ಪ್ರತಾಪ ಸಿಂಹ ಕಾಲೆಳೆದರು.