ಮೈಸೂರು: ‘ಆಡಳಿತಾರೂಢ ಸರ್ಕಾರಗಳು ಜನ ಕಲ್ಯಾಣವನ್ನೇ ಮರೆತಿವೆ. ಜನ ಹಿತ ಬಯಸುವ ಕಾರ್ಯಕ್ರಮಗಳನ್ನು ರೂಪಿಸುವ ಬದಲಿಗೆ, ಜನರಿಂದಲೇ ತೆಗೆದುಕೊಳ್ಳುವುದು ಹೆಚ್ಚಿದೆ’ ಎಂದು ಸಿಐಟಿಯು ರಾಜ್ಯ ಘಟಕದ ಅಧ್ಯಕ್ಷೆ ಎಸ್.ವರಲಕ್ಷ್ಮೀ ದೂರಿದರು.
ಔಷಧಿ ಮಾರಾಟ ಪ್ರತಿನಿಧಿಗಳ ಸಂಘ ನಗರದ ಗಾಂಧಿವೃತ್ತದಲ್ಲಿ ಸೋಮವಾರ ಆಯೋಜಿಸಿದ್ದ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಪ್ರಸ್ತುತ ಜನರು, ರೈತರು, ಕಾರ್ಮಿಕರ ಸಮಸ್ಯೆಯೇ ಪ್ರಸ್ತಾಪವಾಗುತ್ತಿಲ್ಲ. ಈ ವಾಸ್ತವ ಅರಿಯದಿದ್ದರೆ ದೇಶಕ್ಕೆ ಭವಿಷ್ಯವಿರಲ್ಲ’ ಎಂಬ ಆತಂಕ ವ್ಯಕ್ತಪಡಿಸಿದರು.
‘ಔಷಧಿ ಮಾರಾಟ ಪ್ರತಿನಿಧಿಗಳ ಬಗ್ಗೆ ತಪ್ಪು ಕಲ್ಪನೆಯಿದೆ. ಇವರಿಗೆ ಕಾನೂನಿನ ರಕ್ಷಣೆಯೇ ಇಲ್ಲ. ಕಂಪನಿಗಳು ತಮ್ಮ ಲಾಭಕ್ಕಾಗಿ ಶೋಷಿಸುವುದು ಹೊರ ಜಗತ್ತಿಗೆ ತಿಳಿಯುವುದೇ ಇಲ್ಲ. ಕೆಲ ವರ್ಷಗಳ ಆರ್ಥಿಕ ನೀತಿಯಿಂದ ದೊಡ್ಡ ದುಷ್ಪರಿಣಾಮ ಎದುರಿಸುತ್ತಿದ್ದಾರೆ’ ಎಂದು ಹೇಳಿದರು.
‘ಬೃಹತ್ ಔಷಧ ಕಂಪನಿಗಳು ಕಾರ್ಮಿಕರು ಸೇರಿದಂತೆ ಮಾರಾಟ ಪ್ರತಿನಿಧಿಗಳಿಗೆ ಕನಿಷ್ಠ ವೇತನ ನೀಡುತ್ತಿಲ್ಲ. ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಸುವ ಔಷಧಿಗಳಲ್ಲಿ ಗುಣಮಟ್ಟವೇ ಇಲ್ಲ. ಕಳಪೆಯವು ಎಂಬುದು ಸಾಬೀತಾಗಿದೆ. ಇದು ಅಪಾಯಕಾರಿ ವಿಚಾರ. ಇಂಥಹ ಕಂಪನಿಗಳ ಬಗ್ಗೆ ಸರ್ಕಾರ ನಿಯಂತ್ರಣ ಹೊಂದಬೇಕಿದೆ’ ಎಂದು ವರಲಕ್ಷ್ಮೀ ತಿಳಿಸಿದರು.
ಸ್ವಾಗತ ಸಮಿತಿ ಅಧ್ಯಕ್ಷ ಡಾ.ಕೆ.ಜಾವೀದ್ ನಯೀಮ್, ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಎನ್.ಉಮೇಶ್ ಸೇರಿದಂತೆ ಔಷಧಿ ಮಾರಾಟಗಾರರ ಸಂಘದ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಜಾಥಾ: ಫೆಬ್ರುವರಿಯಲ್ಲಿ ನಗರದಲ್ಲಿ ನಡೆಯುವ ಎಫ್ಎಂಆರ್ಐನ ಅಖಿಲ ಭಾರತೀಯ ಸಾಮಾನ್ಯ ಸಭೆಯ ಅಂಗವಾಗಿ ಸೋಮವಾರ ಜಾಥಾಗೆ ಚಾಲನೆ ನೀಡಲಾಯಿತು. ಈ ಜಾಥಾ ಹಾಸನ, ಮಂಗಳೂರು, ಉಡುಪಿ, ಶಿವಮೊಗ್ಗ, ಮಂಡ್ಯ ಜಿಲ್ಲೆಗಳಲ್ಲಿ ನ.15ರವರೆಗೆ ಸಂಚರಿಸಲಿದೆ.