ಮೈಸೂರು: ಮಣಿ ತಂದಿತ್ತ ಏಕೈಕ ಗೋಲಿನ ನೆರವಿನಿಂದ ಕೊಡಗು ತಂಡದವರು ‘ಹಾಕಿ ಮೈಸೂರು’ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಆಹ್ವಾನಿತ ಹಾಕಿ ಟೂರ್ನಿಯಲ್ಲಿ ಚಾಂಪಿಯನ್ ಆದರು.
ಮೈಸೂರು ವಿ.ವಿ ಹಾಕಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ನಲ್ಲಿ ಕೊಡಗು ತಂಡದವರು 1–0 ಗೋಲಿನಿಂದ ಆತಿಥೇಯ ಮೈಸೂರು ತಂಡವನ್ನು ಸೋಲಿಸಿದರು.
ಸೆಂಟ್ರಲ್ ಫಾರ್ವರ್ಡ್ ಆಟಗಾರ ಮಣಿ ಗೆಲುವಿನ ರೂವಾರಿ ಎನಿಸಿದರು. ಅವರು 39ನೇ ನಿಮಿಷದಲ್ಲಿ ಗೋಲು ತಂದಿತ್ತರು. 30 ಯಾರ್ಡ್ಗಳಿಂದ ಡಿಫೆಂಡರ್ ಪಳಂಗಪ್ಪ ತಳ್ಳಿದ ಚೆಂಡನ್ನು ಗುರಿ ಸೇರಿಸಿದರು.
ವಿರಾಮದ ವೇಳೆಗೆ ಗೋಲು ದಾಖಲಾಗಲಿಲ್ಲ. ಹೀಗಾಗಿ, ದ್ವಿತೀಯಾರ್ಧದಲ್ಲಿ ಉಭಯ ತಂಡಗಳು ಆಕ್ರಮಣಕಾರಿ ಆಟಕ್ಕೆ ಮುಂದಾದವು. ಅದರಲ್ಲಿ ಕೊಡಗು ತಂಡಕ್ಕೆ ಯಶಸ್ಸು ಲಭಿಸಿತು. ಗೋಲು ಗಳಿಸಲು ಮೈಸೂರು ಆಟಗಾರರು ನಡೆಸಿದ ಪ್ರಯತ್ನವನ್ನು ಎದುರಾಳಿ ಆಟಗಾರರು ವ್ಯರ್ಥಗೊಳಿಸಿದರು.
ವಿಜೇತ ಕೊಡಗು ತಂಡಕ್ಕೆ ₹ 1 ಲಕ್ಷ ನಗದು, ಟ್ರೋಫಿ ಪ್ರದಾನ ಮಾಡಲಾಯಿತು. ರನ್ನರ್ ಅಪ್ ಮೈಸೂರು ತಂಡಕ್ಕೆ ₹ 50 ಸಾವಿರ ನಗದು ಹಾಗೂ ಟ್ರೋಫಿ ಲಭಿಸಿತು. ಕೊಡಗು ತಂಡದ ಪೊನ್ನಣ್ಣ ‘ಟೂರ್ನಿಯ ಅತ್ಯುತ್ತಮ ಆಟಗಾರ’ ಎನಿಸಿದರು.
ಹಾಸನಕ್ಕೆ ಮೂರನೇ ಸ್ಥಾನ: ಹಾಸನ ತಂಡದವರು ಮೂರನೇ ಸ್ಥಾನ ಪಡೆದರು. ಈ ತಂಡದವರು 4–2 ಗೋಲುಗಳಿಂದ ಶಿವಮೊಗ್ಗ ತಂಡವನ್ನು ಮಣಿಸಿದರು.
ವಿಜಯಿ ತಂಡದ ರಮೇಶ್ (5ನೇ, 53ನೇ ನಿ.), ತಾರಾನಾಥ್ (45ನೇ ನಿ.), ದೀಕ್ಷಿತ್ (52ನೇ ನಿ.) ಹಾಗೂ ಶಿವಮೊಗ್ಗ ತಂಡದ ಸೈಯದ್ ಮಜರ್ (19ನೇ, 37ನೇ ನಿ.) ಗೋಲು ಗಳಿಸಿದರು. ಹಾಸನ ತಂಡಕ್ಕೆ ₹ 30 ಸಾವಿರ ಹಾಗೂ ಶಿವಮೊಗ್ಗ ತಂಡಕ್ಕೆ ₹ 20 ಸಾವಿರ ನಗದು ಬಹುಮಾನ ಲಭಿಸಿತು.