ಮೈಸೂರು: ಸರ್ಕಾರಿ ಭೂಮಿಗೆ ಅನಧಿಕೃತವಾಗಿ ಹಾಕಿಕೊಂಡಿದ್ದ ಬೇಲಿಯನ್ನು ತಹಶೀಲ್ದಾರ್ ರಮೇಶ್ ಬಾಬು ನೇತೃತ್ವದಲ್ಲಿ ಸೋಮವಾರ ತೆರವುಗೊಳಿಸಲಾಯಿತು.
ಕುರುಬಾರಹಳ್ಳಿ ಸರ್ವೆ ನಂಬರ್ 4ರಲ್ಲಿ ಲಲಿತ ಮಹಲ್ ಹೆಲಿಪ್ಯಾಡ್ ಬಳಿಯ ಸರ್ಕಾರಿ ಜಮೀನಿಗೆ ಜೆ.ಮನು ಎಂಬವರು ಬೇಲಿ ಹಾಕಿಕೊಂಡಿದ್ದರು. ಸ್ಥಳದಲ್ಲಿ ಜೆಸಿಬಿ ಯಂತ್ರ ಬರುತ್ತಿದ್ದಂತೆಯೇ ಸ್ಥಳಕ್ಕೆ ಬಂದ ಮನು ಕಾರ್ಯಾಚರಣೆ ನಡೆಸದಂತೆ ತಡೆ ಒಡ್ಡಿದರು. ಜೆಸಿಬಿ ಯಂತ್ರದ ಕೆಳಗೆ ಕುಳಿತು ಅಡ್ಡಿಪಡಿಸಿದರು.
ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಬಂದ ಆಲನಹಳ್ಳಿ ಪೊಲೀಸರು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಕಾರಣದಿಂದ ಮನು ಅವರನ್ನು ಬಂಧಿಸಿದರು.
ಸರ್ಕಾರಿ ಭೂಮಿಗೆ ಅನಧಿಕೃತವಾಗಿ ಬೇಲಿ ಹಾಕಿರುವುದು ಹಾಗೂ ತೆರವು ಕಾರ್ಯಕ್ಕೆ ತಡೆ ಒಡ್ಡಿದ್ದಕ್ಕಾಗಿ ತಹಶೀಲ್ದಾರ್ ರಮೇಶ್ ಬಾಬು ಅವರು ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.