ಮೈಸೂರು: ‘ನಮ್ಮ ಮಾವನವರಿಗೆ ಯಾರು ಯಾರು ನೋವು ನೀಡಿದ್ದರೋ ಅವರೆಲ್ಲರಿಗೂ ತಕ್ಕ ಪಾಠ ಕಲಿಸಿದ ಹಾಗಾಯಿತು’ ಎಂದು ನಂಜನಗೂಡು ಶಾಸಕ, ವಿ.ಶ್ರೀನಿವಾಸಪ್ರಸಾದ್ ಅಳಿಯ ಬಿ.ಹರ್ಷವರ್ಧನ ಇಲ್ಲಿ ಪ್ರತಿಕ್ರಿಯಿಸಿದರು.
‘ಸಚಿವ ಸ್ಥಾನದಿಂದ ಅವರನ್ನು ತೆಗೆದುಹಾಕಿದ್ದ ಸಿದ್ದರಾಮಯ್ಯ ಅವರಿಗೂ ಪಾಠ ಕಲಿಸಲಾಗಿತ್ತು. ಧ್ರುವನಾರಾಯಣ ಒಬ್ಬರು ಬಾಕಿ ಉಳಿದಿದ್ದರು. ಈಗ ಅವರಿಗೂ ಪಾಠ ಕಲಿಸಿದಂತಾಗಿದೆ. ಮಾವನವರಿಂದ ಅನುಕೂಲ ಪಡೆದು, ಅವರಿಗೆ ನೋವುಂಟು ಮಾಡಿದ ಯಾರಿಗೂ ಒಳ್ಳೆಯದಾಗಿಲ್ಲ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
‘ಧ್ರುವನಾರಾಯಣ ಅವರಿಗೆ ದೆಹಲಿ ತೋರಿಸಿದ್ದೇ ಶ್ರೀನಿವಾಸಪ್ರಸಾದ್ ಅವರು. ಆದರೆ, ಅವರನ್ನೇ ತುಳಿದು ಸವಾರಿ ಮಾಡಿದ್ದರು. ನಮ್ಮ ಮಾವ ಕೇಂದ್ರ ಸಚಿವರಾಗುತ್ತಾರೆ. ಅವರೊಂದಿಗೆ ಗೂಟದ ಕಾರಿನಲ್ಲಿ ನಾವು ಹೋಗುತ್ತೇವೆ’ ಎಂದು ಕುಟುಕಿದರು.