ಮೈಸೂರು: ಇಲ್ಲಿನ ಬಸವೇಶ್ವರ ರಸ್ತೆ 15ನೇ ಕ್ರಾಸ್ನಲ್ಲಿ ಮ್ಯಾನ್ಹೋಲ್ಗೆ ಇಳಿದ ವ್ಯಕ್ತಿಯೊಬ್ಬರು, ಅದರಲ್ಲಿ ಹುಡುಕಾಟ ನಡೆಸಿದ ದೃಶ್ಯವನ್ನು ಭಾನುವಾರ ಕಾನೂನು ವಿದ್ಯಾರ್ಥಿ ಪುನಿತ್ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
‘ಮ್ಯಾನ್ಹೋಲ್ಗೆ ಏಕೆ ಇಳಿದಿದ್ದೀರಿ’ ಎಂಬ ಪ್ರಶ್ನೆಗೆ, ವ್ಯಕ್ತಿಯೊಬ್ಬರು ಕಾಸು ಹುಡುಕಲು ಇಳಿದಿದ್ದಾಗಿ ಪ್ರತಿಕ್ರಿಯಿಸಿದ್ದಾರೆ. ಜತೆಗೆ, ಒಂದು ಬಾಂಡಲಿಯಷ್ಟು ಕಪ್ಪುಕಸವನ್ನು ಹೊರತೆಗೆದು ಮ್ಯಾನ್ಹೋಲ್ ಮುಚ್ಚುತ್ತಿರುವ ದೃಶ್ಯಗಳು ವಿಡಿಯೊದಲ್ಲಿವೆ.
ವಿಡಿಯೊವನ್ನು ಪುನಿತ್ ಅವರು ಸಚಿವ ಪ್ರಿಯಾಂಕ ಖರ್ಗೆ ಅವರ ಟ್ವಿಟರ್ ಖಾತೆಗೆ ಟ್ಯಾಗ್ ಮಾಡಿದ್ದಾರೆ. ಇದಕ್ಕೆ ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿರುವ ಸಚಿವರು ಘಟನೆ ಸಂಬಂಧ ತನಿಖೆ ನಡೆಸುವ ಭರವಸೆ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತರಾದ ಶಿಲ್ಪಾನಾಗ್, ‘ಪಾಲಿಕೆಯಿಂದ ಪೌರಕಾರ್ಮಿಕರನ್ನು ಮ್ಯಾನ್ಹೋಲ್ಗೆ ಇಳಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.
ಘಟನೆ ನಡೆದ ಸ್ಥಳದಿಂದ, ಕಳೆದ 15 ದಿನಗಳಲ್ಲಿ ಒಳಚರಂಡಿಗೆ ಸಂಬಂಧಿಸಿದ ದೂರುಗಳು ಬಂದಿಲ್ಲ. ಮ್ಯಾನ್ಹೋಲ್ಗೆ ಇಳಿದಿದ್ದ ವ್ಯಕ್ತಿ, ಕಾಸಿಗಾಗಿ ಹುಡುಕಾಟ ನಡೆಸಿದ್ದ ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ. ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.