ಬೆಂಗಳೂರು: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಆಪ್ತ ಹಾಗೂ ಮೈಸೂರು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಸಿ.ಬಲರಾಮ್ (67) ಅವರು ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೆ, ನಗರದ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನರಾದರು.
ಇವರ ಅಂತ್ಯಕ್ರಿಯೆ ಸಂಜೆ ನೆರವೇರಿತು.
ಮೈಸೂರಿನ ಗರ್ಗೇಶ್ವರಿ ಬಳಿಯ ಕುಪ್ಯ ಗ್ರಾಮದವರಾದ ಇವರು ಮೈಸೂರು ಹಾಲು ಒಕ್ಕೂಟದ (ಮೈಮುಲ್) ನಿರ್ದೇಶಕರೂ ಆಗಿದ್ದರು. ಮಾರ್ಚ್ 16ರಂದು ನಡೆದ ಮೈಮುಲ್ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಈ ವಿಚಾರವಾಗಿ ಅವರು ಮನನೊಂದಿದ್ದರು ಎಂದು ಮೂಲಗಳು ತಿಳಿಸಿವೆ.
ಉಪ್ಪಾರಪೇಟೆ ಠಾಣಾ ವ್ಯಾಪ್ತಿಯ ರಾಯಲ್ ಲಾಡ್ಜ್ನಲ್ಲಿ ಅವರು ಎರಡು ದಿನಗಳಿಂದ ತಂಗಿದ್ದರು. ಬೆಂಗಳೂರಿಗೆ ಬಂದಾಗ ಅವರು ಇದೇ ಲಾಡ್ಜ್ನಲ್ಲೇ ವಾಸ್ತವ್ಯ ಹೂಡುತ್ತಿದ್ದರು. ಶುಕ್ರವಾರ ಬೆಳಿಗ್ಗೆವರೆಗೆ ಕೋಣೆಯಿಂದ ಹೊರಬಾರದ್ದನ್ನು ಗಮನಿಸಿದ್ದ ಲಾಡ್ಜ್ ಸಿಬ್ಬಂದಿ ಪೊಲೀಸರ ಸಹಾಯದಿಂದ ಬಾಗಿಲು ತೆಗೆಸಿದಾಗ ಅವರು ವಿಷ ಸೇವಿಸಿರುವುದು ಗೊತ್ತಾಗಿದೆ.
‘ಕೋಣೆಯಲ್ಲಿ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಕೂಡಲೇ ಅವರನ್ನು ಆಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಕಳುಹಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಶನಿವಾರ ನಿಧನರಾದರು. ಮೃತದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ’ ಎಂದು ಉಪ್ಪಾರ ಪೇಟೆ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
‘ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ಈ ಸಂಬಂಧ ಯುಡಿಆರ್ ಪ್ರಕರಣ ದಾಖಲಿಸಿಕೊಂಡಿದ್ದೇವೆ’ ಎಂದೂ ತಿಳಿಸಿದರು.