ಮೈಸೂರು: ಅಡಗೂರು ಎಚ್. ವಿಶ್ವನಾಥ್ ಅವರು ವಿಧಾನಪರಿಷತ್ ಸ್ಥಾನವನ್ನು ಭಿಕ್ಷೆ ರೂಪದಲ್ಲಿ ಪಡೆದಿದ್ದಾರೆ ಎಂಬ ನಿಗಮ ಮಂಡಳಿಗಳ ಅಧ್ಯಕ್ಷರ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
‘ವಿಶ್ವನಾಥ್ ಅವರು ರಾಜಕಾರಣಿಗಳು ಹೌದು, ಉತ್ತಮ ಸಾಹಿತಿಗಳೂ ಹೌದು. ಇವರು ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಜ್ಞಾನ ಪಡೆದುಕೊಂಡಿದ್ದುದ್ದರಿಂದಲೇ ಇವರನ್ನು ವಿಧಾನಪರಿಷತ್ತಿಗೆ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ. ಇವರ ವಿರುದ್ಧ 9 ಮಂದಿ ನಿಗಮ ಮಂಡಳಿಗಳ ಅಧ್ಯಕ್ಷರು ನೀಡಿರುವ ಹೇಳಿಕೆ ಸರಿಯಲ್ಲ’ ಎಂದು ಅಡಗೂರು ಎಚ್ ವಿಶ್ವನಾಥ್ ಅಭಿಮಾನಿ ಬಳಗದ ಅಧ್ಯಕ್ಷ ಎಸ್.ಲೋಕೇಶ್ ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಖಂಡಿಸಿದರು.
ನಿಗಮ ಮಂಡಳಿಗಳ ಅಧ್ಯಕ್ಷರು ಪಡೆದಿರುವ ಅಧಿಕೃತ ಸರ್ಕಾರಿ ಕಾರುಗಳು, ಹಸಿರು ಶಾಯಿಯ ಅಧಿಕಾರ ಅಡಗೂರು ಎಚ್ ವಿಶ್ವನಾಥ್ ಅವರು ನೀಡಿದ ಬಳುವಳಿ ಮತ್ತು ತ್ಯಾಗದ ಸಂಕೇತ. ಎಲ್ಲಿ ತಮ್ಮ ಅಧಿಕಾರಿ ಹೋಗಿ ಬಿಡುತ್ತದೆ ಎಂಬ ಆತಂಕದಲ್ಲಿ ಈ ರೀತಿಯ ಹೇಳಿಕೆ ನೀಡುವುದನ್ನು ಬಿಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ವಿಶ್ವನಾಥ್ ಒಬ್ಬ ಪಾರದರ್ಶಕ, ಧೈರ್ಯವಂತ, ಸರಳ ರಾಜಕಾರಣಿ. ತಮ್ಮ ಪಕ್ಷದವರೇ ಆದ ಮುಖ್ಯಮಂತ್ರಿಯ ವಿರುದ್ಧ ಬಹಳ ಗಂಭೀರವಾದ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ.ಇಂತಹ ಧೈರ್ಯವಂತ ರಾಜಕಾರಣಿಯ ತೇಜೋವಧೆ ಮಾಡಿ ಹೇಳಿಕೆ ನೀಡಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ.