ವರುಣಾ: ಇಲ್ಲಿನ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಟಿ.ಎಸ್.ಮುರಳಿ ಅವರು ಚಿತ್ರಕಲೆಯಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾರೆ. 12 ಬಾರಿ ವೈಯುಕ್ತಿಕ ಹಾಗೂ 14 ಬಾರಿ ಸಾಮೂಹಿಕ ಚಿತ್ರಕಲಾ ಪ್ರದರ್ಶನ ನೀಡಿರುವ ಹೆಗ್ಗಳಿಕೆ ಇವರದ್ದು.
ಮುರಳಿ ಅವರು ಸಾಂಪ್ರದಾಯಿಕ, ಡಾಟ್ ಚಿತ್ರಕಲೆ, ಜಲವರ್ಣ, ತೈಲವರ್ಣ, ಆಕ್ರಲಿಕ್, ಪೆನ್ಸಿಲ್ ವರ್ಕ್, ಜನಪದ ಶೈಲಿಯ ವರ್ಲಿ ಚಿತ್ರಕಲೆ ಹೀಗೆ ವಿವಿಧ ವಿಭಾಗಗಳಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ. 20 ವರ್ಷಗಳಿಂದ ಎಲೆಮರೆ ಕಾಯಿಯಂತೆ ಯಾವುದೇ ಫಲಾಪೇಕ್ಷೆ ಇಲ್ಲದೆ ಕಲೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಶಾಲಾ- ಕೊಠಡಿಗಳ ಮೇಲೆ ಜನಪದ ಶೈಲಿಯ ವರ್ಲಿ ಚಿತ್ರಕಲೆ ಬಿಡಿಸಿ ಜಿಲ್ಲೆಯ ಎಲ್ಲರ ಗಮನ ಸೆಳೆದು ನೂತನ ಪ್ರಯೋಗಕ್ಕೆ ನಾಂದಿ ಹಾಡಿದರು.
ಮುರಳಿ ಅವರು ಚಿತ್ರಗಳನ್ನು ಬಿಡಿಸುವ ಮೂಲಕ ಮಕ್ಕಳಿಗೆ ಪಾಠ ಮಾಡುತ್ತಾರೆ. ಇದರಿಂದ ವಿದ್ಯಾರ್ಥಿಗಳು ಸುಲಭವಾಗಿ ಗ್ರಹಿಸಲು ಸಾಧ್ಯವಾಗುತ್ತಿದೆ. ಇದರಿಂದ ಹೆಚ್ಚಿನ ಅಂಕಗಳನ್ನು ಪಡೆಯುತ್ತಿದ್ದಾರೆ. ಇದರ ಜೊತೆಗೆ ಮಕ್ಕಳಿಗೆ ಚಿತ್ರಕಲಾ ತರಬೇತಿಯನ್ನೂ ನೀಡುತ್ತಿದ್ದಾರೆ.
ಡಿಎಸ್ಆರ್ಟಿ ಹಾಗೂ ರಾಜ್ಯ ಚಿತ್ರಕಲಾ ಅಕಾಡೆಮಿ ಮೂಲಕ ಮೈಸೂರು, ಹಂಪಿ, ಮಡಿಕೇರಿ ಹಾಗೂ ತುಮಕೂರಿನಲ್ಲಿ ನಾಲ್ಕು ಬಾರಿ ರಾಜ್ಯಮಟ್ಟದ ಚಿತ್ರಕಲಾ ಶಿಬಿರವನ್ನು ಏರ್ಪಡಿಸಿದ್ದಾರೆ. ಅಲ್ಲದೆ, ಮಧ್ಯಪ್ರದೇಶದಲ್ಲಿ ರಾಷ್ಟ್ರೀಯ ಚಿತ್ರಕಲಾ ಶಿಬಿರದಲ್ಲಿ ಭಾಗವಹಿಸಿದ್ದಾರೆ. ಮೈಸೂರು ದಸರಾ ಉಪಸಮಿತಿಯ ಪ್ರಶಸ್ತಿ ಲಭಿಸಿದೆ.